ದಾವಣಗೆರೆ: ಹರಿಹರ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ಶಾಖಾ ಕಚೇರಿ ಉದ್ಘಾಟನೆ ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಹೆಸರು ಹಾಕದ ನಗರಸಭೆ ಆಯುಕ್ತರ ವಿರುದ್ಧ ಶಾಸಕ ಬಿ.ಪಿ. ಹರೀಶ್ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡರು. ನಾನು ಹರಿಹರ ಶಾಸಕ, ನನ್ನ ಕ್ಷೇತ್ರದಲ್ಲಿ ದೂಡಾ ಕಚೇರಿ ಉದ್ಘಾಟನೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರೇ ಬಿಟ್ಟು ಹೋಗಿದೆ. ಇದು ಪ್ರೋಟೊಕಾಲ್ ಉಲ್ಲಂಘನೆ ಅಲ್ಲವೇ..? ಯಾರನ್ನ ಮೆಚ್ಚಿಸೋಕೆ ಈ ಕೆಲಸ ಮಾಡಿದ್ದೀಯಾ..? ಅಥವಾ ಸಾಹುಕಾರನ ಮೆಚ್ಚಿಸೋಕೆ ಇಂತಹ ಕೆಲಸ ಮಾಡ್ತಿಯಾ..? ಎಂದು ತೀವ್ರ ತರಾಟೆ ತೆಗೆದುಕೊಂಡರು.
- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಶಾಖಾ ಕಚೇರಿ ಉದ್ಘಾಟನಾ ಸಮಾರಂಭ
- ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಹೆಸರು ಹಾಕದ ನಗರಸಭೆ
- ನಿಮಯ ಉಲ್ಲಂಘನೆ ವಿರುದ್ಧ ಶಾಸಕರು ನಗರಸಭೆ ಆಯುಕ್ತರ ವಿರುದ್ಧ ಕಿಡಿ
ಹರಿಹರ ನಗರಸಭೆ ಆಯುಕ್ತ ಸುಬ್ರಮಣ್ಯ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದರು. ಹರಿಹರದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಶಾಖಾ ಕಚೇರಿ ಉದ್ಘಾಟನಾ ಸಮಾರಂಭದ ವೇಳೆ ಆಯುಕ್ತರ ವಿರುದ್ಧ ಶಾಸಕ ಹರೀಶ್ ಹರಿಹಾಯ್ದರು. ದೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಎದುರು ಸುಬ್ರಮಣ್ಯ ಶೆಟ್ಟಿಗೆ ಸಖತ್ ಕ್ಲಾಸ್ ತೆಗೆದುಕೊಂಡರು. ದಿನೇಶ್ ಶೆಟ್ಟಿ ,ಫೋನ್ ಮಾಡಿ ಕರೆದಿದ್ದೇವೆ ಎಂದು ಸಮಾಧಾನ ಮಾಡಲು ಯತ್ನಿಸಿದರು. ನೀವು ಕರೆದಿದ್ದೀರಿ ಅಧ್ಯಕ್ಷರೇ… ಆದರೆ, ನಿಮಯದ ಪ್ರಕಾರ ಹರಿಹರ ನಗರಸಭೆ ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಹೆಸರು ಹಾಕಬೇಕಲ್ಲವೇ…? ಎಂದು ಪ್ರಶ್ನಿಸಿದರು.
ಅಲ್ಲಿದ್ದವರು ಶಾಸಕರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಸಮಾಧಾನಗೊಳ್ಳದ ಶಾಕರು, ಕೆಂಡಾಮಂಡಲರಾಗಿ ಆಯಯಕ್ತ ವಿರುದ್ಧ ಕಿಡಿಕಾರಿದರು. ಥೂ ಮುಖ ತೋರಿಸಬೇಡ, ಹೋಗು ಆ ಕಡೆ. ಏಯ್ ನನಗೇ ಸರಿಯಾಗಿ ಮಾತನಾಡು ಅಂತೀಯ, ಮುಚ್ಕೊಂಡಿರು. ಯಾರ, ಸಾಹುಕಾರನ ಮೆಚ್ಚಿಸೋಕೆ ಇದನ್ನೆಲ್ಲ ಮಾಡ್ತೀಯಾ? ನೀನು ಮತ್ತೆ ಮಾತನಾಡಿದರೆ ಹುಷಾರು, ನಡಿ ಆ ಕಡೆ ಹೋಗು’ ಎಂದು ಗದರಿದ್ದಾರೆ. ಸಮೀಪದಲ್ಲಿದ್ದವರು ಶಾಸಕರನ್ನು ತಡೆದಿದ್ದಾರೆ.
ಈ ಹಿಂದೆ ದಾವಣಗೆರೆ ದೂಡಾ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಹರಿಹರ ಅಭಿವೃದ್ಧಿ ವಿಚಾರವಾಗಿ ಶಾಸಕ ಹರೀಶ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ವಾಗ್ದಾಳಿ ನಡೆದಿತ್ತು. ಇದೀಗ ಹರಿಹರ ದೂಡಾ ಶಾಖಾ ಕಚೇರಿ ಉದ್ಘಾಟನೆಯಲ್ಲಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಬಿಟ್ಟಿದ್ದಕ್ಕೆ ಶಾಸಕ ಹರೀಶ್ ಕೆಂಡಾಮಂಡಲರಾಗಿದ್ದರು.



