ಹರಿಹರ: ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಏಕಾಏಕಿ ಹಾಸ್ಟೆಲ್ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದೀಗ ಆತ್ಮಹತ್ಯೆ ಮಾಡಿಕೊಂಡ ಯುವತಿ ಅಕ್ಕ ನೀಡಿದ ದೂರನಲ್ಲಿ, ಆತ್ಮಹತ್ಯೆಗೆ ಅದೇ ಕಾಲೇಜಿನ ಯುವಕನ ಹೆಸರು ಉಲ್ಲೇಖಿಸಲಾಗಿದೆ.
ನಗರದ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ನ ವರ್ಷಾ ಆತ್ಮಹತ್ಯೆಗೆ ಸಹಪಾಠಿ ಕಿರುಕುಳ ಕಾರಣ ಎಂದು ಆರೋಪಿಸಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದ ವರ್ಷಾಳ ಸಹಪಾಠಿ ಕುರುಬರಹಳ್ಳಿ ರಮೇಶ್ ಕಾರಣ’ ಎಂದು ಮೃತ ವರ್ಷಾ ಅವರ ಅಕ್ಕ ರಂಜಿತಾ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಾವಣಗೆರೆ ತಾಲ್ಲೂಕು ಎಚ್.ಬಸಾಪುರದ ನಿವಾಸಿ ಶಿವಣ್ಣ ಅವರ ಪುತ್ರಿ ವರ್ಷಾ ಹಾಸ್ಟೆಲ್ನ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದರು.ವರ್ಷಾಳ ಪೋಷಕರು ಹಾಸ್ಟೆಲ್ ವಾರ್ಡನ್ ಹಾಗೂ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು.
ಪ್ರೀತಿಸುವುದಾಗಿ ನಂಬಿಸಿ ನನ್ನ ತಂಗಿಗೆ ಫೋನ್ ಕೊಡಿಸಿದ್ದ ರಮೇಶ್ ಹಲವು ಬಾರಿ ಫೋನ್ ಮಾಡಿ, ಹಾಸ್ಟೆಲ್ನಿಂದ ಹೊರಕ್ಕೆ ಬರುವಂತೆ ಒತ್ತಾಯ ಮಾಡುತ್ತಿದ್ದ. ಇದಲ್ಲದೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ ಎಂದು ನನ್ನ ತಂಗಿ ನನಗೆ ಫೋನ್ ಮಾಡಿ ಹೇಳಿಕೊಂಡು ಅತ್ತಿದ್ದಳು. ನನ್ನ ತಂಗಿಯ ಹಣೆ, ಕುತ್ತಿಗೆ, ಕೈಯ ಮೇಲೆ ಗಾಯದ ಗುರತುಗಳಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.



