ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಎರಡು ಸಮುದಾಯದ ನುಡುವೆ ವಿವಾದಕ್ಕೆ ಕಾರಣವಾಗಿದ್ದ ಮದಕರಿ ನಾಯಕರ ಮಹಾದ್ವಾರ (ಕಮಾನು), ಅನಧಿಕೃತ ನಾಮಫಲಕ, ಪುತ್ಥಳಿಯನ್ನು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿ ತೆರವುಗೊಳಿಸಿದೆ. ಉಪ ವಿಭಾಗಾಧಿಕಾರಿ ದುರ್ಗಾಶ್ರೀ ನೇತೃತ್ವದಲ್ಲಿ 144ನೇ ಸೆಕ್ಷನ್ನಡಿ ನಿಷೇಧಾಜ್ಞೆ ಜಾರಿಗೊಳಿಸಿ, ಪೊಲೀಸ್ ಬಂದೋಬಸ್ತ್ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು. ತೆರವು ಕಾರ್ಯಕ್ಕೆ ಅಡ್ಡಿಪಡಿಸಿದ ಮಹಿಳೆಯರೂ ಸೇರಿ 30 ಜನರ ವಶಕ್ಕೆ ಪಡೆದರು.
ಕುರುಬ ಸಮಾಜ ಪ್ರತಿಭಟನೆ: ಮದಕರಿ ನಾಯಕ ದ್ವಾರ ತೆರವು ಗೊಳಿಸುವಂತೆ ಕಳೆದ ಕೆಲ ದಿನಗಳಿಂದ ಕುರುಬ ಸಮಾಜ ಪ್ರತಿಭಟನೆ ಮಾಡುತ್ತಿದೆ. ಕುರುಬ ಸಮಾಜದವರ ಪ್ರತಿಭಟನೆಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನನಾಂದಪುರಿ ಸ್ವಾಮೀಜಿ ಭೇಟಿ ನೀಡಿ ಹೋರಾಟಕ್ಕೆ ಬೆಂಬಲಿಸಿದ್ದರು.
ಭಾನುವಳ್ಳಿ ಗ್ರಾಮದಲ್ಲಿ ಎರಡೂವರೆ ದಶಕದಿಂದ ಅಧಿಕೃತವಾಗಿದ್ದ ಮದಕರಿ ನಾಯಕ ದ್ವಾರವನ್ನು ಜಿಲ್ಲಾಡಳಿತದ ಸೂಚನೆಯಂತೆ ತೆರವುಗೊಳಿಸಲಾಗಿದೆ. ಗ್ರಾಮದಲ್ಲಿ ಎರಡು ಸಮುದಾಯದ ನಡುವೆ ಪ್ರತಿಷ್ಠೆಯ ಕಾರಣದಿಂದ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.
ನಾಯಕ ಸಮಾಜದ ಮದಕರಿ ನಾಯಕ ಮಹಾದ್ವಾರ, ವೃತ್ತದ ನಾಮಫಲಕ ಹಾಗೂ ಕುರುಬ ಸಮಾಜದ ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿಚಾರವಾಗಿ ಕಳೆದ ಕೆಲವು ತಿಂಗಳಿನಿಂದ ಗ್ರಾಮದಲ್ಲಿ ಪ್ರತಿಭಟನೆ, ಧರಣಿಗಳು ನಡೆಯುತ್ತಿದ್ದವು. ಈ ವಿಚಾರದಿಂದಾಗಿ ಆಡಳಿತ ಯಂತ್ರಕ್ಕೂ ಇದು ತಲೆ ನೋವು ತಂದಿಟ್ಟಿತ್ತು. ಇಡೀ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಟಗಿತ್ತು. ಈ ಹಿನ್ನೆಲೆಯಲ್ಲಿ 28ಕ್ಕೂ ಹೆಚ್ಚು ಅನಧಿಕೃತ ಪುತ್ಥಳಿ, ನಾಮಫಲಕ ತೆರವು ಮಾಡಲಾಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಾಲ್ಮೀಕಿ ಸಮುದಾಯದ ಸುಮಾರು 30ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.
ಸತ್ಯಶೋಧನಾ ಸಮಿತಿಯಲ್ಲಿ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಅಧ್ಯಕ್ಷರಾಗಿದ್ದು, ಗ್ರಾಮದಲ್ಲಿ ಸುಮಾರು 25 ಅನಧಿಕೃತ ಪುತ್ಥಳಿ, ನಾಮಫಲಕ ಇರುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ ಅವುಗಳ ತೆರವಿಗೆ ಸೂಚನೆ ನೀಡಿದ್ದರಿಂದ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮಾ.11ರಿಂದ ಮಾ.15ರವರೆಗೆ ಗ್ರಾಮದಲ್ಲಿ 144ನೇ ಸೆಕ್ಷನ್ ನಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದ್ದಾರೆ.
ಕತಹಸೀಲ್ದಾರ್ ಗುರು ಬಸವರಾಜ, ಡಿವೈಎಸ್ಪಿ ವಿಜಯಕುಮಾರ ಸಂತೋಷ್, ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡ, ಸಿಪಿಐ ಸುರೇಶ್ ಸಗರಿ, ಇಒ ರಮೇಶ್ ಸುಲ್ಪಿ, ಮಲೇಬೆನ್ನೂರು ಪಿಎಸ್ಐ ಪ್ರಭು, ಭೇಟಿ ನೀಡಿ ಎರಡು ಕಡೆಯವರ ಮನವಿ ಸ್ವೀಕರಿಸಿ, ಜಿಲ್ಲಾಡಳಿತಕ್ಕೆ ಕಳಿಸಿಕೊಡುವ ಭರವಸೆ ನೀಡಿದರು.



