ದಾವಣಗೆರೆ: ರಾಜ್ಯ ಮತ್ತು ಜಿಲ್ಲೆಯಲ್ಲಿ ಈ ಬಾರಿ ಬರಗಾಲ ಇರುವುದರಿಂದ ಹರಿಹರ ತಾಲೂಕಿನಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಹರ ಜಾತ್ರಾ ಮಹೋತ್ಸವವನ್ನು ಅತ್ಯಂತ ಸರಳವಾಗಿ 2024ರ ಜನವರಿ 14 ಮತ್ತು 15ರಂದು ಆಚರಿಸಲು ನಿರ್ಧರಿಸಲಾಗಿದೆ. ಮಹೋತ್ಸ ವವನ್ನು ಸರಳವಾಗಿ ಧಾರ್ಮಿಕ ರೂಪದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ.
ಮಠದಲ್ಲಿ ನಡೆದ ಪಂಚಮಸಾಲಿ ಜಗದ್ಗುರು ಪೀಠದ ಟ್ರಸ್ಟಿನ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಭೆಯ ಸಾನಿಧ್ಯ ವಹಿಸಿದ್ಹಾದರು. ಮಠದ ಪ್ರಧಾನ ಧರ್ಮದರ್ಶಿ ಬಿ. ಸಿ. ಉಮಾಪತಿ, ಆಡಳಿತಾಧಿಕಾರಿ ಹೆಚ್.ಪಿ. ರಾಜಕುಮಾರ ನೇತೃತ್ವದಲ್ಲಿ ನಡೆದ ಪದಾಧಿಕಾರಿಗಳ ನಡೆದ ಸಭೆಯಲ್ಲಿ ಸರಳವಾಗಿ ಆಚರಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.
ಈ ಬಾರಿ ರಾಜ್ಯ ದಲ್ಲಿ ಬರಗಾಲ ಇರುವುದು ಹಾಗೂ ನಮ್ಮ ಸಮಾಜವು ಕೃಷಿ ಪ್ರಧಾನ ರೈತಾಪಿ ವರ್ಗ ಆಗಿರುವುದರಿಂದ ಜನರು ಸಂಕಷ್ಟದಲ್ಲಿ ಇದ್ದಾರೆ. ಆದ್ದರಿಂದ ಹರ ಜಾತ್ರಾ ಮಹೋ ತ್ಸವವನ್ನು ಈ ವರ್ಷ ಸರಳವಾಗಿ ಶ್ರೀಮಠದಲ್ಲಿ ಆಚರಿಸಲು ಒಮ್ಮತ ಅಭಿಪ್ರಾಯ ವ್ಯಕ್ತವಾಯಿತು.
ಸರಳ ಹರ ಜಾತ್ರಾ ಮಹೋತ್ಸವದ ಕಾರ್ಯಕ್ರಮ ವಿವರಗಳನ್ನು ಮುಂದಿನ ದಿನಗಳಲ್ಲಿ ಸಮಾಜ ಬಾಂಧವರಿಗೆ ತಿಳಿಸುತ್ತೇವೆ ಎಂದು ಶ್ರೀ ಪೀಠದ ಆಡಳಿತಾಧಿಕಾರಿ ಎಚ್. ಬಿ. ರಾಜಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



