ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಅಡುಗೆ ಅನಿಲದ ದಾಸ್ತಾನು ಹೇರಳವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಆತಂಕದಿಂದ ಅತಿಯಾಗಿ ಗ್ಯಾಸ್ ಬುಕಿಂಗ್ ಮಾಡುತ್ತಿರುವುದು ಕಂಡುಬಂದಿದೆ ಇದರಿಂದಾಗಿ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.
ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ; ದಾವಣಗೆರೆ ಕೆ.ಎಂ. ಸುರೇಶ್ ಬಿಜೆಪಿ ಅಭ್ಯರ್ಥಿ
ಸಾಕಷ್ಟು ದಾಸ್ತಾನು ಲಭ್ಯ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಡುಗೆ ಅನಿಲ ಪೂರೈಕೆದಾರರು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 38 ಐಒಸಿಎಲ್, ಹೆಚ್.ಪಿ.ಸಿ.ಎಲ್ ಮತ್ತು ಬಿಪಿಸಿಎಲ್ ಕಂಪನಿಗಳ ಅಡಿಯಲ್ಲಿ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿದ್ದು ಸಾಕಷ್ಟು ದಾಸ್ತಾನು ಲಭ್ಯವಿದೆ. ಆದರೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿರುವುದಿಲ್ಲ. ಗೃಹ ಉಪಯೋಗಿ ಅಡುಗೆ ಅನಿಲ್ ಸಿಲಿಂಡರ್ ಅನ್ನು ಬುಕ್ ಮಾಡಿದ 25 ದಿನದೊಳಗೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ನಮ್ಮ ತಂದೆ ಇವರಿಗೊಬ್ಬರಿಗೇ ಮಾತು ಕೊಟ್ಟಿದ್ದಾರಾ?- ಅವನೊಬ್ಬನಿಂದ ಇಡೀ ಊರು ಹಾಳು; ಸಚಿವ ಮಲ್ಲಿಕಾರ್ಜುನ
ಗೃಹ ಬಳಕೆ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಕೆಗೆ ನಿಷೇಧ
ಮನೆಯ ಬಳಕೆಯ ಸಿಲಿಂಡರ್ಗಳನ್ನು ಹೋಟೆಲ್, ರೆಸ್ಟೋರೆಂಟ್ ಅಥವಾ ಇತರ ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ರಸ್ತೆ ಬದಿಯ ಗಾಡಿಗಳು ಅಥವಾ ವಾಣಿಜ್ಯ ಮಳಿಗೆಗಳಲ್ಲಿ ಗೃಹ ಬಳಕೆಯ ಸಿಲಿಂಡರ್ ಕಂಡುಬಂದಲ್ಲಿ ತಕ್ಷಣವೇ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಸೇವೆಗಳಾದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಶಾಲೆಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ವಸತಿ ನಿಲಯಗಳಲ್ಲಿ ಅಡುಗೆ ಅನಿಲದ ಕೊರತೆಯಾಗದಂತೆ ವಿತರಕರು ಸರಬರಾಜು ಮಾಡುವಂತೆ ಸೂಚನೆ ನೀಡಿದರು.
ಪ್ರಸ್ತುತ ಪದವಿ ಪೂರ್ವ ಪರೀಕ್ಷೆ ನಡೆಯುತ್ತಿದ್ದು, ನಂತರ ಎಸ್.ಎಸ್.ಎಲ್.ಸಿ ಮತ್ತು ಪದವಿ ಪರೀಕ್ಷೆಗಳು ನಡೆಯುವುದರಿಂದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಊಟದಲ್ಲಿ ತೊಂದರೆಯಾಗದಂತೆ ನಿರಂತರ ಪೂರೈಕೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ವಸತಿ ನಿಲಯಗಳಲ್ಲಿ ಗ್ಯಾಸ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಚಪಾತಿ, ಪೂರಿ ದೊಸೆಯಂತಹ ಅಡುಗೆಗಳನ್ನು ತಾತ್ಕಾಲಿಕ ಮುಂದೂಡಿ, ಬದಲಿಗೆ ಉಪ್ಪಿಟ್ಟು, ಫಲಾವ್, ತರಕಾರಿ ಬಾತ್, ಅನ್ನ, ತರಕಾರಿ ಸಂಬಾರು ಮಾಡುವಂತೆ ಸಲಹೆ ನೀಡಿದರು.
ಕಾಳಸಂತೆಯಲ್ಲಿ ಮಾರಾಟ ಮಾಡಿದ್ರೆ ಪರವಾನಗಿ ರದ್ದು
ಸಿಲಿಂಡರ್ ಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಏಜೆನ್ಸಿಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು. ಗ್ಯಾಸ್ ದಾಸ್ತಾನುಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಎಸ್ಪಿ ಶೇಖರ್ ಹೆಚ್.ಟಿ ಅವರು ಮಾತನಾಡಿ ಗೃಹ ಉಪಯೋಗಿ ಅನಿಲ ಸಿಲಿಂಡರ್ಗಳನ್ನು ವಾಣಿಜ್ಯ ಬಳಕೆ ಸಿಲಿಂಡರ್ ಗಳಿಗೆ ತುಂಬಿಸುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಇಂತಹ ಸಂದರ್ಭದಲ್ಲಿ ಸಿಲಿಂಡರ್ ಗಳು ಕಳ್ಳತನವಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಸಾರ್ವಜನಿಕರು ಜಾಗೃತಿಯಿಂದ ಇರುವಂತೆ ತಿಳಿಸಿದರು.
ಗ್ರಾಹಕರು ಇ-ಕೆವೈಸಿ ಮಾಡಿಸಿ ಬುಕಿಂಗ್ನ್ನು ಗ್ರಾಹಕರ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬುಕಿಂಗ್ ಮಾಡಬೇಕು. ಬುಕಿಂಗ್ ಮಾಡಿದ 25 ದಿನಗಳ ನಂತರ ಸಿಲಿಂಡರ್ ಮನೆಗೆ ಬರಲಿದ್ದು ಸಿಲಿಂಡರ್ ವಿತರಣೆ ಮಾಡಿದಾಗ ಗ್ರಾಹಕರ ಸಂಖ್ಯೆಗೆ ಒಟಿಪಿ ಬರಲಿದೆ. ಪ್ರಸ್ತುತ 38 ವಿವಿಧ ಗ್ಯಾಸ್ ಕಂಪನಿಯಲ್ಲಿ ಪ್ರಸ್ತುತ ಅಂದಾಜು 7 ಲಕ್ಷ ಮನೆ ಬಳಕೆ ಸಿಲಿಂಡರ್ ಗಳಿಗೆ ಸಂಪರ್ಕವಿದೆ ಎಂದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಆಹಾರ ನಿರೀಕ್ಷಕರು, ಅನಿಲ ಪೂರೈಕೆ ಮಾಡುವ ಎಜೆನ್ಸಿಗಳ ಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.



