ದಾವಣಗರೆ: ದಾವಣಗೆರೆ ಮಹಾನಗರ ಪಾಲಿಕೆಯ ಅವರಗೊಳ್ಳ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತುರ್ತು ಕ್ರಮಗಳಿಗೆ ಸೂಚನೆ ನೀಡಿದರು.
ನೆಲಭರ್ತಿ ಜಾಗದಲ್ಲಿ ಸಂಗ್ರಹವಾಗುವ ಪಾರಂಪರಿಕ ತ್ಯಾಜ್ಯವನ್ನು ವಿಲೇಮಾಡಲು ಈಗಾಗಲೇ ಕಾರ್ಯಾದೇಶ ನೀಡಿದ್ದು ತುರ್ತಾಗಿ ಕೆಲಸ ಪ್ರಾರಂಭ ಮಾಡುವ ಮೂಲಕ ಮುಂದಿನ 6 ತಿಂಗಳಲ್ಲಿ ತ್ಯಾಜ್ಯ ಬೇರ್ಪಡಿಸುವ ಕೆಲಸ ಮುಕ್ತಾಯ ಮಾಡಲು ಸೂಚನೆ ನೀಡಿ ಘನತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸುವುದರಿಂದ ಬೆಂಕಿ ಅವಘಡವನ್ನು ತಕ್ಷಣವೇ ತಡೆಗಟ್ಟಬಹುದಾಗಿದೆ. ಬೆಂಕಿ ಅವಘಡ ಸಂಭವಿಸಲು ಕಿಡಿಗೇಡಿಗಳು ಇಲ್ಲಿಗೆ ಅನಾವಶ್ಯಕವಾಗಿ ಬಾರದಂತೆ ಮತ್ತು ಇಂತಹ ಕಿಡಿಗೇಡಿಗಳ ಮೇಲೆ ನಿಗಾವಹಿಸಲು ಸಿಸಿ ಕ್ಯಾಮೆರಾಗಳನ್ನು ತುರ್ತಾಗಿ ಅಳವಡಿಸುವ ಜೊತೆಗೆ 24*7 ಕಾವಲುಗಾರರನ್ನು ನೇಮಕ ಮಾಡಲು ಸೂಚಿಸಿದರು.
ಬೆಂಕಿ ನಂದಿಸಲು ಸುತ್ತಲೂ ನೀರನ ಪೈಪ್ಲೈನ್ ಅಳವಡಿಕೆ ಮಾಡಿ ಅಗ್ನಿ ನಂದಕ ಪರಿಕರ ಅಳವಡಿಸಲು ಮತ್ತು ನೆಲಭರ್ತಿ ಜಾಗ ಇನ್ನೂ ಅವಶ್ಯಕತೆ ಇರುವುದರಿಂದ ಖರೀದಿ ಮಾಡಲು ಪ್ರಕ್ರಿಯೆ ಆರಂಭಿಸಲು ತಿಳಿಸಿ ಆಕಸ್ಮಿಕ ಅಗ್ನಿ ಅವಘಡಗಳನ್ನು ತಡೆಗಟ್ಟಲು ಕ್ರಿಯಾ ಯೋಜನೆ ತಯಾರು ಮಾಡಲು ಪಾಲಿಕೆ ಆಯುಕ್ತರಿಗೆ ಮತ್ತು ಅಗ್ನಿಶಾಮಕ ಮತ್ತು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.
ಈ ವೇಳೆ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.