ದಾವಣಗೆರೆ: ನೀರಾವರಿ ಇಲಾಖೆ ಕೊಟ್ಟ ಮಾತಿನಂತೆ ಭದ್ರಾ ಜಲಾಶಯದಿಂದ 100 ದಿನಗಳ ಕಾಲ ನಿರಂತರ ನೀರು ಹರಿಸಬೇಕು ಎಂದು ರೈತರ ಆಗ್ರಹಿಸಿದ್ದಾರೆ. ಮುಂಗಾರು ಹಂಗಾಮಿನ ನೀರು ಹರಿಸುವುದನ್ನು ನಿಲ್ಲಿಸುವ ಸಲುವಾಗಿಯೇ ಇಂದು ಕಾಡಾ ಸಭೆ ಕರೆದಿದ್ದಾರೆ. ಇದನ್ನು ವಿರೋಧಿಸಿ ರೈತ ಒಕ್ಕೂಟ ಸೇರಿ ರೈತ ಮುಖಂಡರು ದಾವಣಗೆರೆಯಲ್ಲಿ ಪ್ರತಿಭಟಿಸಿ ಎಸಿಗೆ ಮನವಿ ಸಲ್ಲಿಸಿದರು. ಈ ಸಭೆ ರದ್ದುಪಡಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಭದ್ರಾ ಜಲಾಶಯ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ರೈತರ ಬೆಳೆಗೆ ಮುಖ್ಯ ನೀರಿನ ಮೂಲ. ನಿರಂತರ ನೂರು ದಿನಗಳ ಕಾಲ ಮುಂಗಾರು ಹಂಗಾಮಿನ ನೀರು ಹರಿಸುವುದಾಗಿ ನೀರಾವರಿ ಇಲಾಖೆ ಭರವಸೆ ನೀಡಿತ್ತು. ಇದೀಗ ಚನ್ನಗಿರಿ, ಶಿವಮೊಗ್ಗ, ಭದ್ರಾವತಿಯ ತೋಟಗಾರಿಕೆ ಬೆಳೆಯ ರೈತರ ಒತ್ತಡದಿಂದ ನೀರು ನಿಲ್ಲಿಸಲು ಸಭೆ ಕರೆಯಲಾಗಿದೆ.
ನೀರು ಹರಿಸಲು ಪ್ರಾರಂಭವಾಗಿ 25 ದಿನ ಕಳೆದಿದ್ದು, ಉಳಿದ 75 ದಿನಗಳ ಕಾಲ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.ಈಗಾಗಲೇ ರೈತರು ತಮ್ಮ ಜಮೀನುಗಳಲ್ಲಿ ಭತ್ತ ನಾಟಿ ಮಾಡಿದ್ದು, ಕಾಡಾದಿಂದ ನೀರು ನಿಲ್ಲಿಸಲು ಇದೀಗ ಸಭೆ ಕರೆದಿರುವುದು ರೈತರು ಹೋರಾಟಕ್ಕಿಳಿಯುವಂತೆ ಮಾಡಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ರೈತರು ಅಕ್ರಮ ಪಂಪ್ ಸೆಟ್ ಹಾಕಿಕೊಂಡಿದ್ದು, ಅಡಿಕೆ ತೋಟಗಳಿಗೆ ನೀರು ಹರಿಸುತ್ತಿದ್ದಾರೆ. ಆದರೆ, ಇಲ್ಲಿ ದಾವಣಗೆರೆ ಭಾಗದ ಭತ್ತದ ಬೆಳೆದ ರೈತರು ನೀರಿಲ್ಲದೇ ಪರದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಡಾ ಸಭೆಯನ್ನು ದಾವಣಗೆರೆ ರೈರು ಬಹಿಷ್ಕಾರ ಮಾಡಲಿದ್ದೇವೆ ಎಂದರು.



