ದಾವಣಗೆರೆ: ಸಾಲದ ಹೊರಯಿಂದ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹರಿಹರ ತಾಲೂಕಿನ ಎಳೆಹೊಳೆ ಗ್ರಾಮದ ಅಶೋಕ ಹಾಗೂ ನ್ಯಾಮತಿ ತಾಲ್ಲೂಕಿನ ಕುರುವ ತಾಂಡಾದ ರೈತ ಮಹಿಳೆ ಕಮಲಾಬಾಯಿ (50) ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಳೆಹೊಳೆ ಗ್ರಾಮದ ಅಶೋಕ ಕೃಷಿ ಹಾಗೂ ಟ್ರ್ಯಾಕ್ಟರ್ ಖರೀದಿಗೆ ಬ್ಯಾಂಕ್ನಲ್ಲಿ 4 ಲಕ್ಷ, ವೈಯಕ್ತಿಕವಾಗಿ 6 ಲಕ್ಷ ಸಾಲ ಮಾಡಿದ್ದರು. ಸಮರ್ಪಕ ಮಳೆಯಾಗದ ಕಾರಣ ಮೂರು ವರ್ಷಗಳಿಂದ ಬೆಳೆ ಬಂದಿರಲಿಲ್ಲ. ಇದರಿಂದ ನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ನ್ಯಾಮತಿ ತಾಲ್ಲೂಕಿನ ಕುರುವ ತಾಂಡಾದ ರೈತ ಮಹಿಳೆ ಕಮಲಾಬಾಯಿ (50) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ 2 ಎಕರೆ ಜಮೀನು ಇದ್ದು, ಒಂದು ವರ್ಷದ ಹಿಂದೆ ಅಡಿಕೆ ತೋಟ ಮಾಡಿದ್ದರು. ಮಗಳ ಮದುವೆಗೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 50,000 ಹಾಗೂ ವೈಯಕ್ತಿಕವಾಗಿ 5.40 ಲಕ್ಷ ಸಾಲ ಮಾಡಿದ್ದರು. ಮಳೆ ಕೈಕೊಟ್ಟ ಕಾರಣ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.