ದಾವಣಗೆರೆ: ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ಟುತ್ತಿರುವ ಬಿಜೆಪಿ ನಾಯಕರು 40%ರಷ್ಟು ಕಮಿಷನ್ ಪಡೆದಿಲ್ಲ ಎಂದು ಎದೆ ಮುಟ್ಟಿಕೊಂಡು ಹೇಳಲಿ. ನಾವು ಎಲ್ಲದಕ್ಕೂ ರೆಡಿ ಇದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್ ಎಸ್. ಮಲ್ಲಿಕಾರ್ಜುನ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ನಾನು ಎಲ್ಲಿ ಬೇಕಾದರೂ ಗಂಟೆ ಹೊಡೆಯಲು ತಯಾರಿದ್ದೇನೆ. ಶೇ. 40ರಷ್ಟು ಕಮಿಷನ್ ಪಡೆದವರು ಅಲ್ಲಿಗೆ ಬರಲಿ. ನಾನು ಅವರ ಹೆಸರು ಹೇಳಲ್ಲ. ಎಲ್ಲಿಗೆ ಬೇಕಾದರೂ ಕರೆಯಿರಿ, ಉರುಳು ಸೇವೆ ಮಾಡೋಣ. ಅದನ್ನು ಒಂದು ಸಲ ನೋಡೇ ಬಿಡೋಣ. ನಮ್ಮ ಸರ್ಕಾರ ಬಂದ ಮೇಲೆ ಕಮಿಷನ್ ಸಿಗುತ್ತಿಲ್ಲ. ಹೀಗಾಗಿ ಬಿಜೆಪಿ ಅವರು ಒದ್ದಾಡುತ್ತಿದ್ದಾರೆ ಎಂದು ಕಿಡಿಕಾರಿದರು.
5 ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದೇವೆ. ಇದರಿಂದ ಬಡವರಿಗೆ ಅನುಕೂಲ ಆಗುತ್ತದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಮಾಡಿ ನುಡಿದಂತೆ ನಡೆಯುತ್ತಿದ್ದೇವೆ. ವಿರೋಧ ಪಕ್ಷದವರು ಇದನ್ನು ತಡೆದುಕೊಳ್ಳದೇ ಮಾತನಾಡುತ್ತಿದ್ದಾರೆ. ವಿಪಕ್ಷಗಳು ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಬಿಜೆಪಿ, ಜೆಡಿಎಸ್ ಹತಾಶರಾಗಿ ಆರೋಪಿಸುತ್ತಿದ್ದಾರೆ ಎಂದರು.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ಗೆ ಬಹುಮತ ಇದ್ದರೂ ಅಧಿಕಾರ ತಪ್ಪಿಸಿದ್ದರು. ವಿಧಾನಪರಿಷತ್ ಸದಸ್ಯರು, ರಾಜ್ಯಸಭೆ, ಲೋಕಸಭೆ ಸದಸ್ಯರೆಲ್ಲರ ಮತ ಹಾಕಿಸಿ ಗೆದ್ದಿರುವುದು ಬಿಜೆಪಿ ಮಹಾನ್ ನಾಯಕರಿಗೆ ಸಲ್ಲುತ್ತದೆ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಈಗ ಕಾಂಗ್ರೆಸ್ಗೆ ಮಹಾನಗರ ಪಾಲಿಕೆಯ ನಾಲ್ಕು ಸ್ಥಾನಗಳು ಪಾಲಾಗಿವೆ. ಪಾಲಿಕೆಗೆ ಹೆಚ್ಚಿನ ಅನುದಾನ ತಂದು, ಉತ್ತಮ ಕೆಲಸ ಮಾಡಬೇಕಿದೆ. ನಾವೇನೂ ಆಪರೇಷನ್ ಮಾಡಿಲ್ಲ. ನಾವು ಏನಕ್ಕೆ ಮಾಡೋಣ. ಪಕ್ಷೇತರರು ನಮ್ಮ ಕಡೆ ಬಂದಿದ್ದಾರೆ ಎಂದು ಹೇಳಿದರು.
ಮೊನ್ನೆ ಕಾಂಗ್ರೆಸ್ ಸರ್ಕಾರ ಮಾಡಿದ ಕೆಲಸವನ್ನು ಬಸವಂತಪ್ಪ ಹೇಳಿದ್ದರು. ಹರಿಹರ ಶಾಸಕ ಬಿ.ಪಿ. ಹರೀಶ್ ಆ ರೀತಿ ಮಾತನಾಡಬಾರದಿತ್ತು. ಲೋಕಸಭೆ ಚುನಾವಣೆ ಬರುತ್ತಿದೆ. ಅದಕ್ಕೆ ಇಂತಹ ಆರೋಪ ಮಾಡುತ್ತಿದ್ದಾರೆ ಎಂದರು.



