ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ವ್ಯಾಪ್ತಿಗೆ ಹರಿಹರ ಸುತ್ತಮುತ್ತಲಿನ ಮತ್ತಷ್ಟು ಗ್ರಾಮಗಳು ಸೇರ್ಪಡೆಗೊಂಡಿವೆ. ಇನ್ಮುಂದೆ ಹೊಸ ಲೇಔಟ್ಗೆ ಪರವಾನಗಿಗೆ ಈ ದಾಖಲೆ ಅಗತ್ಯವಾಗಿದೆ.
ಯಾವ ಗ್ರಾಮಗಳು ಸೇರ್ಪಡೆ: ಹರಿಹರ ನಗರಸಭೆಯ ಆವರಣದಲ್ಲಿ ನೂತನವಾಗಿ ಕಾರ್ಯಾರಂಭಿಸಿರುವ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ, ಹರಿಹರ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಾದ ಸಾಲುಕಟ್ಟೆ, ಬೆಳ್ಳೂಡಿ, ಷಂಶಿಪುರ, ದೊಗ್ಗಳ್ಳಿ, ಬನ್ನಿಕೊಡು, ಕೆ.ಬೇವಿನಹಳ್ಳಿ, ಗುತ್ತೂರು, ಬಕ್ಕಾಪುರ, ಹರ್ಲಾಪುರ, ಅಮರಾವತಿ, ಶೇರಾಪುರ, ಮಿಟ್ಲಕಟ್ಟಿ, ಮಹಜೇನಹಳ್ಳಿ, ಹನಗವಾಡಿ, ಹರಗನಹಳ್ಳಿ, ಹಲಸಬಾಳು ಗ್ರಾಮಗಳು ಒಳಪಡುತ್ತವೆ ಎಂದು ದೂಡಾ ಪ್ರಾಧಿಕಾರದ ಆಯುಕ್ತ ಹುಲ್ಮನಿ ತಿಮ್ಮಣ್ಣ ಹೇಳಿದರು.
ಹೊಸ ಲೇಔಟ್ ಪರವಾನಗಿಗೆ ಯಾವ ದಾಖಲೆ ಅಗತ್ಯ; ಹರಿಹರ ಸುತ್ತಮುತ್ತಲಿನ ಗ್ರಾಮಗಳು ದೂಡಾ ವ್ಯಾಪ್ತಿಗೆ ಸೇರಿದ ನಂತರ ಹೊಸ ಬಡಾವಣೆ ನಿರ್ಮಾಣಕ್ಕೆ ಈ ದಾಖಲೆ ಕಡ್ಡಾಯವಾಗಿದೆ. ಕ್ರಯಪತ್ರದ ದೃಢೀಕರಣದ ನಕಲು ಪ್ರತಿ, ಭೂ ದಾಖಲೆಯ ಸರ್ವೆ ಸ್ಕೆಚ್, ಅಟ್ಲಾಸ್ ಅಲಿನೇಶನ್ ನಕಾಶೆಯ ನಕಲು ದೃಢೀಕರಣ ಪ್ರತಿ, ಇತ್ತೀಚಿನ ಋಣಭಾರ ರಹಿತ್ವ ದೃಢೀಕೃತ ಪ್ರಮಾಣಪತ್ರ, ಇತ್ತೀಚಿನ ಆರ್ ಟಿಸಿ ಪ್ರತಿ, ಆಧಾರ ಕಾರ್ಡ್, ಉದ್ದೇಶಿತ ವಿನ್ಯಾಸ ನಕ್ಷೆ, ನಿವೇಶನದ ಫೋಟೋ, ಅನುಮೋದಿತ ವಿನ್ಯಾಸ ನಕ್ಷೆ ಮತ್ತು ಆದೇಶ ಪ್ರತಿಯನ್ನು ದೂಡಾ ಶಾಖಾ ಕಚೇರಿಗೆ ಸಲ್ಲಿಸಿದಲ್ಲಿ ನೂತನ ಲೇಔಟ್ಗೆ ಪರವಾನಗಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದೂಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಅಣ್ಣಪ್ಪ, ಯೋಜನಾಧಿಕಾರಿಗಳಾದ ರಘು, ಪ್ರದೀಪ್, ಸಹಾಯಕ ಅಭಿಯಂತರರಾದ ಪರಮೇಶ್ವರ ನಾಯ್ಕ, ಸುಜೇಕುಮಾರ, ಕೆ.ಟಿ. ಅಕ್ಷತಾ, ಶ್ವೇತಾ, ಹರಿಹರ ಶಾಖಾ ಕಚೇರಿಯ ಸಿಬ್ಬಂದಿ ಅಮಿತ್ ಇದ್ದರು.



