ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಏ. 18 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದೆ.
ಆರೋಗ್ಯ ಮೇಳದ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಅಲ್ಲದೆ ಆರೋಗ್ಯ ಶಿಕ್ಷಣ ನೀಡುವ ಸಲುವಾಗಿ ಜಾಗೃತಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಆರೋಗ್ಯ ಮೇಳದಲ್ಲಿ ಸಾರ್ವಜನಿಕರು, ಬಡಜನರು, ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗದ ಜನರಿಗೆ ನುರಿತ ತಜ್ಞ ವೈದ್ಯರಿಂದ ಅಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಉಚಿತವಾಗಿ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ ನಡೆಸಲಾಗುವುದು.
ಶಿಬಿರದಲ್ಲಿ ವೈದ್ಯಕೀಯ ತಜ್ಞರು, ಶಸ್ತ್ರಚಿಕಿತ್ಸಕರು, ಮಕ್ಕಳ ತಜ್ಞರು, ಎಲುಬು-ಕೀಲು ತಜ್ಞರು, ಚರ್ಮ-ಲೈಂಗಿಕ ತಜ್ಞರು, ಮನೋವೈದ್ಯಕೀಯ ಚಿಕಿತ್ಸಕರು, ಕಿವಿ ಮೂಗು ಗಂಟಲು ತಜ್ಞರು, ಕಣ್ಣಿನ ಪರೀಕ್ಷೆ, ದಂತ ಚಿಕಿತ್ಸೆ, ಉಚಿತ ಔಷಧಿ ಮತ್ತು ಪ್ರಯೋಗಾಲಯ ಸೇವೆ ಲಭ್ಯವಿದ್ದು, ಹೆಚ್ಐವಿ ಆಪ್ತ ಸಮಾಲೋಚಕರ ಸೇವೆಯೂ ಲಭ್ಯವಿರುತ್ತದೆ. ಆಯುಷ್ ಕ್ಲಿನಿಕ್ ಆಯುರ್ವೇದಿಕ್, ಸಿದ್ಧ ಹೋಮಿಯೋಪತಿ, ಯುನಾನಿ ಔಷಧಿ ಕ್ಲಿನಿಕ್ ಸೇವೆ ಲಭ್ಯವಿದೆ.
ಶಿಬಿರ ಅಂಗವಾಗಿ, ಅಸಾಂಕ್ರಾಮಿಕ ರೋಗ ತಪಾಸಣೆ, ಪೌಷ್ಠಿಕ ಆಹಾರ ತಯಾರಿ ಪ್ರಾತ್ಯಕ್ಷಿಕೆ, ವಿವಿಧ ಆರೋಗ್ಯ ಕಾರ್ಯಕ್ರಮಗಳ ಅರಿವು ಮೂಡಿಸುವಿಕೆ, ಅರ್ಹರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ (ಎಬಿಎಆರ್ಕೆ ಕಾರ್ಡ್) ನೀಡಲಾಗುವುದು. ಎಬಿಎಆರ್ಕೆ ಕಾರ್ಡ್ಗಾಗಿ ಫಲಾನುಭವಿಗಳು ಬಿಪಿಎಲ್/ಎಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಸಲ್ಲಿಸಬೇಕು ಹಾಗೂ 10 ರೂ. ಶುಲ್ಕ ಪಾವತಿಸಬೇಕು. ಎಲ್ಲ ನಾಗರಿಕರಿಗೂ ಡಿಜಿಟಲ್ ಆರೋಗ್ಯ ಗುರುತಿನ ಐಡಿ ಮಾಡಿಕೊಡಲಾಗುವುದು. ತಾಲ್ಲೂಕಿನ ಎಲ್ಲ ಸಾರ್ವಜನಿಕರು ಉಚಿತ ಆರೋಗ್ಯ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.



