ದಾವಣಗೆರೆ: ದಾವಣಗೆರೆ ನಗರದ ರಾಷ್ಟ್ರೀಯ ಹೆದ್ದಾರಿ-48 ರ ರಸ್ತೆಗೆ ಹೊಂದಿಕೊಂಡಿರುವ ಬಿ.ಐ.ಇ.ಟಿ ರಸ್ತೆಯ ಎಡಭಾಗದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಅಕ್ರಮವಾಗಿ ಒಣ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಸೂರ್ಯ ಎಂಬಾತನನ್ನು ಅಬಕಾರಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿ ಸೂರ್ಯ ( 20) ಹರಪನಹಳ್ಳಿ ನಗರದ ಇಸ್ಲಾಂಪುರ, 08ನೇ ವಾರ್ಡ್ ನಿವಾಸಿಯಾಗಿದ್ದು, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಅಂದಾಜು ರೂ. 5000 ಮೌಲ್ಯದ 88 ಗ್ರಾಂ ಒಣ ಗಾಂಜಾ ಮತ್ತು 1,15,000 ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ) ಹೊಸಪೇಟೆ ವಿಭಾಗ ಇವರ ನಿರ್ದೇಶನದ ಮೇರೆಗೆ ಮೇ.05 ರಂದು ದಾವಣಗೆರೆ ಜಿಲ್ಲೆ ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ಮಾರ್ಗದರ್ಶನದಲ್ಲಿ ದಾವಣಗೆರೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ರಾಮನಗೌಡ ಮುದಿಗೌಡರ್ ಇವರ ಸಮಕ್ಷಮದಲ್ಲಿ, ಅಬಕಾರಿ ನಿರೀಕ್ಷಕರಾದ ವಿಧ್ಯಾ ಜಿ.ಬಿ ಇವರು ಅಬಕಾರಿ ಉಪ ನಿರೀಕ್ಷಕರಾದ ರಂಗಸ್ವಾಮಿ ಸಿ.ಆರ್ ಮತ್ತು ಸಿಬ್ಬಂದಿಗಳಾದ ವಿನಾಯಕ ಬಿ, ಅಂಜನಪ್ಪ, ದಿಳ್ಳೇಪ್ಪ ರ್ಯಾವಳ್ಯಾರ್, ರಾಜು ಎಂ ಬೋಸ್ಲೇ ಹಾಗೂ ಪಂಚರೊಂದಿಗೆ ಮೇ.05 ಸಂಜೆ 06 ಗಂಟೆಗೆ ಖಚಿತ ಭಾತ್ಮಿ ಮೇರೆಗೆ ದಾವಣಗೆರೆ ನಗರದ ರಾಷ್ಟ್ರೀಯ ಹೆದ್ದಾರಿ-48 ರ ರಸ್ತೆಗೆ ಹೊಂದಿಕೊಂಡಿರುವ ಬಿ.ಐ.ಇ.ಟಿ ರಸ್ತೆಯ ಎಡಭಾಗದ ಸ್ವಾಮಿ ವಿವೇಕಾನಂದ ಬಡಾವಣೆಯ ವಾರ್ಡ್ ನಂ.39, ಎಂ.ಗೋವಿಂದ ಪೈ ಮಾರ್ಗ, 7ನೇ ಅಡ್ಡ ರಸ್ತೆ ಎಂಬ ಸೂಚನಾ ಫಲಕದ ಎದುರು ಕಪ್ಪುಬಣ್ಣದ 125 ಸಿ.ಸಿ. ಪಲ್ಸ್ರ್ ಬೈಕ್ ನಂ.ಕೆ.ಎ-35/ಇಪಿ-7606 ರಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 88 ಗ್ರಾಂ ಒಣ ಗಾಂಜಾ ಮತ್ತು ವಾಹನವನ್ನು ಪಂಚರ ಸಮಕ್ಷಮ ಇಲಾಖಾ ವಶಕ್ಕೆ ಜಪ್ತಿಪಡಿಸಿಕೊಳ್ಳಲಾಗಿದೆ. ಎಂದು ದಾವಣಗೆರೆ ಜಿಲ್ಲಾ ಅಬಕಾರಿ ಉಪ ಆಯುಕ್ತ ಬಿ. ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



