ದಾವಣಗೆರೆ: ನಗರದ ಕೇಂದ್ರ ಬಿಂದು ಗುಂಡಿ ಸರ್ಕಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಲ್ಲೆ ನಡೆಸಿ ಚಿನ್ನ, ನಗದು ಸುಲಿಗೆ ಮಾಡಿದ ಐವರು ಬಾಲ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಅಡ್ಡಗಟ್ಟಿ ಹಲ್ಲೆ
ಸೆ.24ರಂದು ಬೆಳಗಿನ ಜಾವ 01-40ರ ಸುಮಾರಿಗೆ ಜಗದೀಶ ಎಂಬುವರು ಗುಂಡಿ ಸರ್ಕಲ್ ಹತ್ತಿರ ಶಾಮನೂರು ರಸ್ತೆಯಲ್ಲಿ ತಮ್ಮೂರು ಜರೆಕಟ್ಟೆ ಗ್ರಾಮಕ್ಕೆಂದು ನಡೆದುಕೊಂಡು ಹೋಗುತ್ತಿದ್ದರು. ಯಾರೋ ಅಪರಿಚಿತ ವ್ಯಕ್ತಿಗಳು ಎರಡು ಸ್ಕೂಟಿಗಳಲ್ಲಿ ಬಂದು ಜಗದೀಶ ಅಡ್ಡಗಟ್ಟಿ ಹಲ್ಲೆ ಮಾಡಿ ಮೊಬೈಲು, 4300/- ರೂ ನಗದು , ಕೊರಳಲ್ಲಿದ್ದ 25 ಗ್ರ ತೂಕದ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದರು.
ಐವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರ ವಶ
ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ಎಂದು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್ ಹಾಗೂ ಎಎಸ್ಪಿ ಪರಮೇಶ್ವರ ಹೆಗಡೆ & ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ ರವರುಗಳ ಮಾರ್ಗದರ್ಶನದಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪಿಐ ಶ್ರೀಮತಿ ಎಂ.ಆರ್ ಚೌಬೆ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವು ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆಕಾರ್ಯ ಕೈಗೊಂಡಿದ್ದು, ಪ್ರಕರಣದ ಕೃತ್ಯದಲ್ಲಿ ಭಾಗಿಯಾಗಿದ್ದ 05 ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಲಾಗಿದೆ.
ಬಾಲಕರಿಂದ ಒಟ್ಟು 2400/- ನಗದು ಹಣ, ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರವಾಹನಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ. ಸದರಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಘನ ಬಾಲನ್ಯಾಯಮಂಡಳಿ ಮುಂದೆ ಹಾಜರುಪಡಿಸಿರುತ್ತದೆ. ಘನ ಬಾಲ ನ್ಯಾಯಮಂಡಳಿಯು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಸರ್ಕಾರಿ ಬಾಲಕರ ವೀಕ್ಷಣಾಲಯದಲ್ಲಿರಿಸಲು ಆದೇಶ ಮಾಡಿರುತ್ತದೆ. ಸದರಿ ಪ್ರಕರಣದಲ್ಲಿ ಉಳಿದ ಆರೋಪಿತರು ತಲೆಮರೆಸಿಕೊಂಡಿದ್ದು, ಇವರುಗಳ ಪತ್ತೆ ಕಾರ್ಯ ಮುಂದುವರೆದಿರುತ್ತದೆ. ಕಾರ್ಯಾಚರಣೆ ನಡೆದಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸನೆ ವ್ಯಕ್ತ ಪಡಿಸಿದ್ದಾರೆ.