ದಾವಣಗೆರೆ: ಪ್ರಚೋದನಕಾರಿ ಘೋಷಣೆ ಪೋಸ್ಟ್, ಮತೀಯ, ಧಾರ್ಮಿಕ, ವ್ಯಕ್ತಿ ನಿಂದನೆ ಪೋಸ್ಟ್ , ದ್ವೇಷ ಭಾಷಣ, ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಸುಮೋಟೋ (Suo-Moto) ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಜಿಲ್ಲಾ ಪೊಲೀಸ್ ನೀಡಿದೆ.
ದಾವಣಗೆರೆ ನಗರದಲ್ಲಿ ದಿನಾಂಕ: 20-09-2025 ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಸತೀಶ್ ಪೂಜಾರಿ ಇವರು ಘೋಷಣೆಗಳನ್ನು ಕೂಗಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಂಡಿರುತ್ತದೆ.
ಈ ಪ್ರಕರಣದ ಘೋಷಣೆಗಳ ವಿರೋಧವಾಗಿ ಸಾಮಾಜಿಕ ಜಾಲತಾಣಗಳಾದ ಎಕ್ಸ್, ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಹಾಗೂ ವಾಟ್ಸಾಪ್ ಗಳಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆಗಳ / ಭಾಷಣಗಳು, ವಿಡಿಯೋಗಳು, ಪೋಸ್ಟ್ ಗಳು ಮಾಡಿದ್ದಲ್ಲಿ ಅಂತವರ ಮೇಲೆ ನಿರ್ದಾಕ್ಷಣ್ಯವಾಗಿ ಸುಮೋಟೋ (Suo-Moto) ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಆದಗ್ಯೂ ಯಾವುದೇ ವಿವಾಧಾತ್ಮಕ ಭಾಷಣ / ಹೇಳಿಕೆ ವಿಡಿಯೋ ಪೋಸ್ಟ್ ಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬಹುದು ಹಾಗೂ ಸೈಬರ್ ಪೊಲೀಸ್ ಠಾಣೆಗೆ ಬೇಟಿ ನೀಡಿ ಸಹ ದೂರು ನೀಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳು, ಪೋಸ್ಟ್ ಗಳು, ಮತೀಯ, ಧಾರ್ಮಿಕ, ವ್ಯಕ್ತಿ ನಿಂದನೆ ಪೋಸ್ಟ್ ಗಳು, ದ್ವೇಷ ಭಾಷಣ, ಸುಳ್ಳುಸುದ್ದಿಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.



