ದಾವಣಗೆರೆ: ಒನ್ ವೇ ಯಲ್ಲಿ ಬರುತ್ತಿದ್ದ ಬೈಕ್ ಸವಾರನನ್ನು ನಿಲ್ಲಿಸಿ, ಸಂಚಾರ ನಿಯಮ ಉಲ್ಲಂಘಿಸಿ ಈ ರೀತಿ ಬರುವುದು ಸರಿಯಲ್ಲ ಎಂದ ಜಿಲ್ಲಾಧಿಕಾರಿಗೆ ( ಡಿಸಿ) ನೀನು ಯಾವನೋ ನನಗೆ ಕೇಳಕ್ಕೆ ಎಂದು ರೋಪ್ ಹಾಕಿದ್ದ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು 2 ಸಾವಿರ ದಂಡ ವಿಧಿಸಿದ್ದಾರೆ.
ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಅವರು
ನಗರದ ಎಸ್.ಎಸ್ ಬಡಾವಣೆಯ ಶಾರದಾಂಬ ವೃತ್ತದ ಬಳಿ ಗುರುವಾರ ಬೆಳಿಗ್ಗೆ ಸೈಕ್ಲಿಂಗ್ ಹೊರಟಿದ್ದರು. ಈ ವೆಳೆ ಒನ್ ವೇ ನಲ್ಲಿ ಬಂದ ದ್ವಿಚಕ್ರ ವಾಹನ ಸವಾರ ಬಂದಿದ್ದಾನೆ. ಈ ರೀತಿ ಒನ್ ವೇ ಯಲ್ಲಿ ಬರುವುದು ತಪ್ಪು ಎಂದು ವಾಹನ ಸವಾರನಿಗೆ ಡಿಸಿ ತಿಳಿ ಹೇಳಿದ್ದಾರೆ. ಈ ವೇಳೆ ಆ ವಾಹನ ಸವಾರ ನೀನು ಯಾವನೋ ನನಗೆ ಕೇಳಕ್ಕೆ ಅವಾಜ್ ಹಾಕಿದ್ದನು.
ಜಿಲ್ಲಾಧಿಕಾರಿಗಳು ಎಸ್ಪಿಗೆ ಸವಾರನ ಬೈಕ್ ಫೋಟೋ ಕಳುಹಿಸಿ ದಂಡ ಹಾಕಲು ಸೂಚಿಸಿದರು. ಅದರಂತೆ ಜಿಲ್ಲಾಧಿಕಾರಿಗೆ ಅವಾಜ್ ಹಾಕಿದ ಎಸ್. ಎಸ್. ಬಡಾವಣೆಯ ನಾಗರಾಜ್ ಎಂಬ ಸ್ಕೂಟರ್ ಸವಾರನನ್ನು ಹಿಡಿದು ಹೆಲೈಟ್ ಧರಿಸದೆ ವಾಹನ ಚಾಲನೆ, ಅತಿ ವೇಗದ ಚಾಲನೆ ಸೇರಿದಂತೆ ಒಟ್ಟು 3 ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 2000 ರೂ ದಂಡವನ್ನು ಪೊಲೀಸರು ವಿಧಿಸಿದ್ದಾರೆ.
ಬೆಳಿಗ್ಗೆ ಹಾಲಿನ ಹಣ 500 ರೂ. ಕಳೆದುಕೊಂಡಿದ್ದೆ. ಆ ಟೆನ್ನನ್ನಲ್ಲಿ ಒನ್ ವೇನಲ್ಲಿ ಚಲಿಸಿಬಿಟ್ಟೆ. ನಾನು ಅವಾಜ್ ಹಾಕಿದ್ದು ಜಿಲ್ಲಾಧಿಕಾರಿಗಳಿಗೆ ಅಂತ ನನಗೆ ತಿಳಿದಿರಲಿಲ್ಲ ಎಂದು ಅವಾಜ್ ಹಾಕಿದ ಸ್ಕೂಟರ್ ಸವಾರ ಟ್ರಾಫಿಕ್ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ. ಟ್ರಾಫಿಕ್ ಸಿಪಿಐ ನಲವಾಗಲು ಮಂಜುನಾಥ್ ನೇತೃತ್ವದಲ್ಲಿ ಸಿಬ್ಬಂದಿ ದಂಡ ವಿಧಿಸಿದ್ದಾರೆ.