ದಾವಣಗೆರೆ: ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ ಆರೋಪಿಯನ್ನು ಬಂಧನ ಮಾಡಿದ್ದು, 33,24,300 ರೂ. ಮೌಲ್ಯದ ಚಿನ್ನದ ಆಭರಣಗಳು, ಬೆಳ್ಳಿ ಸಾಮಾನುಗಳು, ನಗದು ಹಣ ಹಾಗು ಕೃತ್ಯಕ್ಕೆ ಉಪಯೋಗಿಸಿದ ಕಾರು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿಗೆ ಹೋಗಿ ಬರುವಷ್ಟರಲ್ಲಿ ಕಳ್ಳತನ
ದಾವಣಗೆರೆ ನಗರ ವಾಸಿ ಶಂಕರಯ್ಯ ದಿನಾಂಕ 19.05.2025ರಂದು ಬೆಳಿಗ್ಗೆ ಸುಮಾರು 10.30 ಗಂಟೆ ಸಮಯದಲ್ಲಿ ವಿದ್ಯಾ ನಗರ 1 ನೇ ಮೇನ್ 8 ನೇ ಕ್ರಾಸ್ ರಸ್ತೆಯಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದು, ನಂತರ ದಿನಾಂಕ: 06.06.2025 ರಂದು ಮಧ್ಯಾಹ್ನ ಸುಮಾರು 2.00 ಗಂಟೆಗೆ ಬಂದು ನೋಡಿದಾಗ ಮನೆಯ ಬಾಗಿಲು ಇಂಟರ್ ಲಾಕ್ ಬೀಗ ಮುರಿದಿದ್ದು ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳನ್ನು ಬೆಳ್ಳಿ ಸಾಮಾನುಗಳನ್ನು ಹಾಗು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಲು ಪೊಲೀಸ್ ಉಮಾ ಪ್ರಶಾಂತ, ಎಎಸ್ಪಿ ಜಿ..ಮಂಜುನಾಥ, ಡಿವೈಎಸ್ಪಿ ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್ , ಪಿ ಎಸ್ ಐ ವಿಶ್ವನಾಥ ಜಿ ಎನ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ದಿ:09-06-2025 ರಂದು ಪ್ರಕರಣದಲ್ಲಿ ಆರೋಪಿತನಾದ 1) ಸೈಯ್ಯದ್ ಅಕ್ಬರ್, 58 ವರ್ಷ, ಕವಾಡಿಗರಹಟ್ಟಿ, ಗೋಳೆರಹಟ್ಟಿ ತಾಜಪೀರ್ ಬಡಾವಣೆ,1 ನೇ ಕ್ರಾಸ್ ಚಿತ್ರದುರ್ಗ ಇತನನ್ನು ಬಂಧಿಸಲಾಗಿದೆ.
ವಶಕ್ಕೆ ಪಡೆದ ಸ್ವತ್ತಿನ ವಿವರ
ಆರೋಪಿತನಿಂದ ಒಟ್ಟು 33.24 ಲಕ್ಷ ರೂ ಮೌಲ್ಯದ 332.740 ಗ್ರಾಂ ತೂಕದ ಬಂಗಾರದ ಆಭರಣಗಳು, 544 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು 1,32,000/-ರೂ ನಗದು ಹಣ ಹಾಗು ಕೃತ್ಯಕ್ಕೆ ಉಪಯೋಗಿಸಿದ ಕೆಎ63-ಎಮ್-0579 ನೇ ನಂಬರಿನ ಬಲೇನೋ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿತರು ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.
ಆರೋಪಿ ಹಿನ್ನೆಲೆ
ಶಿವಮೊಗ್ಗ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ 2013 ರಲ್ಲಿ ಮನೆಕಳ್ಳತನ ಪ್ರಕರಣ, ಚಿತ್ರದುರ್ಗ ಟೌನ್ ಪೊಲೀಸ್ ಠಾಣೆಯಲ್ಲಿ 2020 ರಲ್ಲಿ ಮನೆಕಳ್ಳತನ ಪ್ರಕರಣದಲ್ಲಿ ಆರೋಪಿತನಾಗಿರುತ್ತಾನೆ. ಸದರಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.