ದಾವಣಗೆರೆ: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ದಾವಣಗೆರೆ ನಗರದಲ್ಲಿ ಒಟ್ಟು 390 ಗ್ರಾಂ ಒಣ ಗಾಂಜಾ ಹಾಗೂ ಒಂದು ದ್ವಿಚಕ್ರವಾಹನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ದಾವಣಗೆರೆ ಜಿಲ್ಲೆಯ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಬಿ.ಶಿವಪ್ರಸಾದ್ ತಿಳಿಸಿದ್ದಾರೆ.
390 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಗಾಂಜಾದ ಅಂದಾಜು ಮೌಲ್ಯ ರೂ.7,750 ಮತ್ತು ವಾಹನ ಮೌಲ್ಯ ರೂ.25,000 ಒಟ್ಟು ರೂ.32750 ಗಳಾಗಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತ ಹೊಸಪೇಟೆ ವಿಭಾಗ ಇವರ ನಿರ್ದೇಶನದ ಮೇರೆಗೆ ಮಾರ್ಚ್ 24 ರಂದು ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಉಪಾಧೀಕ್ಷ ಕೆ.ಎಲ್.ನಾಗರಾಜ್ ಇವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕಿ ವಿದ್ಯಾ.ಜಿ.ಬಿ ಇವರು ಎನ್.ಹೆಚ್.4 ರಸ್ತೆಯ ಪಕ್ಕದಲ್ಲಿರುವ ಹಳೇ ಕುಂದುವಾಡ ಗ್ರಾಮದಿಂದ ದಾವಣಗೆರೆ ಕಡೆ ಹೋಗುವ ಸರ್ವೀಸ್ ರಸ್ತೆಯ ಹತ್ತಿರ ಹೊನ್ನೂರ್ ಅಲಿ, 24 ವರ್ಷ, ಡೋರ್ ನಂ: 66, 15 ನೇ ಕ್ರಾಸ್, ಬಾಷಾನಗರ, ದಾವಣಗೆರೆ ಎಂಬುವನು ಅಕ್ರಮವಾಗಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ನಲ್ಲಿ 280 ಗ್ರಾಂ ಒಣ ಗಾಂಜಾವನ್ನು ಹೊಂದಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿರುತ್ತಾರೆ.
ಮಾ.25 ರಂದು ಅಬಕಾರಿ ನಿರೀಕ್ಷಕ ವಿನೋದ್ ಕಳಸಪ್ಪ ಗೋಳ್ ಇವರು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ನಗರದ ಹದಡಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ-4 ರ ಬ್ರಿಡ್ಜ್ ಕೆಳಭಾಗದಲ್ಲಿ ಹದಡಿ ಕಡೆಯಿಂದ ದಾವಣಗೆರೆ ನಗರದ ಕಡೆಗೆ ಬರುವ ರಸ್ತೆಯಲ್ಲಿ ಫಸಲ್, 22 ವರ್ಷ, ಕೆ.ಎಂ.ಕೊಟ್ಟಿಗೆ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರು ಕೆಂಪು ಬಣ್ಣದ ಬಜಾಜ್ ಪ್ಲಾಟಿನ ದ್ವಿಚಕ್ರ ವಾಹನ ನೋಂದಣಿ ಸಂಖ್ಯೆ : ಕೆಎ 51, ವಿ 3061 ರಲ್ಲಿ ಮಾರಾಟದ ಉದ್ದೇಶಕ್ಕಾಗಿ ಒಂದು ಕಪ್ಪು ಪ್ಲಾಸ್ಟಿಕ್ ಕವರ್ನಲ್ಲಿ 110 ಗ್ರಾಂ ಒಣಗಿದ ಕಡ್ಡಿ ಹಾಗೂ ಬೀಜ ಮಿಶ್ರಿತ ಗಾಂಜಾ ಸೊಪ್ಪನ್ನು ಹೊಂದಿರುವುದನ್ನು ಪತ್ತೆ ಹಚ್ಚಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಎರಡು ಪ್ರಕರಣಗಳಿಂದ ಒಟ್ಟು 390 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಗಾಂಜಾದ ಅಂದಾಜು ಮೌಲ್ಯ ರೂ.7,750 ಮತ್ತು ವಾಹನ ಮೌಲ್ಯ ರೂ.25,000 ಒಟ್ಟು ರೂ.32750 ಗಳಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಬಿ.ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.