ದಾವಣಗೆರೆ: ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟ ಬ್ಯಾಂಕ್ ಮ್ಯಾನೇಜರ್, ತಮ್ನದೇ ಬ್ಯಾಂಕ್ ಗೆ ಬರೋಬ್ಬರಿ 49 ಲಕ್ಷ ವಂಚಿಸಿ ಪರಾರಿಯಾದ ಘಟನೆ ಜಿಲ್ಲೆಯ ಜಗಳೂರಿನಲ್ಲಿ ನಡೆದಿದೆ.
ಜಗಳೂರು ಪಟ್ಟಣದ ಕೆ ಎಲ್ ಎಂ ಆಕ್ಸಿವಾ ಫಿನ್ ವೆಸ್ಟ್ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ. ಅದೇ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿದ್ದ ಅರವಿಂದ್ ರೆಡ್ಡಿ, ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚನೆ ಎಸಗಿದ್ದಾನೆ. ಅರವಿಂದ್ ರೆಡ್ಡಿ ತನ್ನ 9 ಜನ ಸ್ನೇಹಿತರ ಹೆಸರಲ್ಲಿ 84.5 ತೊಲ ನಕಲಿ ಬಂಗಾರ ಅಡವಿಟ್ಟು 49 ಲಕ್ಷ ರೂಪಾಯಿ ಹಣ ಪಡೆದು ಎಸ್ಕೇಪ್ ಆಗಿದ್ದಾನೆ.
ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ನಾಪತ್ತೆಯಾಗಿದ್ದಾನೆ. ಅರವಿಂದ್ ರೆಡ್ಡಿ ಸ್ನೇಹಿತರಿಗೆ ಬ್ಯಾಂಕ್ ನಿಂದ ನೋಟಿಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಾವು ಯಾವುದೇ ಬಂಗಾರ ಅಡವಿಟ್ಟಿಲ್ಲ ಎಂದು ಸ್ನೇಹಿತರು ತಿಳಿಸಿದ್ದು, ಇದೀಗ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



