ದಾವಣಗೆರೆ: ಬೀಗ ಹಾಕಿದ ಮನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ ಒಟ್ಟು 03 ಪ್ರಕರಣಗಳಿಂದ ಅಂದಾಜು ರೂ. 5.70 ಲಕ್ಷ ಮೌಲ್ಯದ 106.9 ಗ್ರಾಂ ಚಿನ್ನ, 8,717 ನಗದು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ.
ದಿನಾಂಕ: 30.12.2024 ರಂದು ಹಗಲು ವೇಳೆಯಲ್ಲಿ ಹೊನ್ನಾಳಿ ಪಟ್ಟಣದ ದೊಡ್ಡಿ ರಸ್ತೆಯ ಮಂಜುಳಾ ಅವರ ಮನೆಯ ಬೀಗ ಮುರಿದು ಯಾರೋ ಕಳ್ಳರು ರೂ. 8.46 ಲಕ್ಷ ಮೌಲ್ಯದ ಹಣ ಮತ್ತು ಬಂಗಾರದ ಆಭರಣ ಕಳ್ಳತನ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಎಎಸ್ಪಿಗಳಾದ ವಿಜಯಕುಮಾರ್ ಎಂ ಸಂತೋಷ, ಜಿ. ಮಂಜುನಾಥ ಡಿವೈಎಸ್ಪಿ ಸ್ಯಾಮ್ ವರ್ಗೀಸ್, ಮಾರ್ಗದರ್ಶನದಲ್ಲಿ ಹಾಗೂ ಹೊನ್ನಾಳಿ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಹೆಚ್ ನೇತೃತ್ವದಲ್ಲಿ ಆರೋಪಿತರ ಪತ್ತೆಗಾಗಿ ತಂಡ ರಚಿಸಲಾಗಿತ್ತು.
ಈ ತಂಡ ದಿನಾಂಕ: 01.01.2025 ರಂದು ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಆರೋಪಿ 1) ಮಹಮದ್ ರಫೀಕ್ @ ಲೇಂಡಾ (31) 2) ಮಹೇಶ @ ರಮೇಶ (32) 3) ಶಕ್ಷಾವಲಿ ಎಸ್.ಕೆ (23) ಇವರನ್ನು ಪತ್ತೆ ಹಚ್ಚಿ ಬಂಧನ ಮಾಡಿ ವಿಚಾರಣೆ ನಡೆಸಿದಾಗ ಆರೋಪಿತರು ಮೇಲ್ಕಂಡ ಪ್ರಕರಣದ ಮಾಹಿತಿ ನೀಡಿದ್ದಾರೆ.
ಹೊನ್ನಾಳಿ, ಹರಿಹರ ಸೇರಿ ಒಟ್ಟು 03 ಪ್ರಕರಣಗಳು ಪತ್ತೆಯಾಗಿರುತ್ತವೆ. ಆರೋಪಿಗಳಿಂದ ರೂ 8,717/- ನಗದು ಹಣ, ಅಂದಾಜು ರೂ. 5.70 ಲಕ್ಷ ಮೌಲ್ಯದ ಒಟ್ಟು 106.9 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಒಂದು ಬೈಕ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



