ದಾವಣಗೆರೆ: ದೌರ್ಜನ್ಯದಡಿ ಕೊಲೆಯಾದ ಕುಟುಂಬದ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರವನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 3 ನೇ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವರ್ಷ ಫೆಬ್ರವರಿ 2 ರಂದು ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಡಾಕ್ಯಾನಾಯ್ಕ್ ಮತ್ತು ಏಪ್ರಿಲ್ 4 ರಂದು ಹೊನ್ನಾಳಿಯ ಮಂಜಪ್ಪ ಹಾಗೂ ಸೆಪ್ಟೆಂಬರ್ 18 ರಂದು ನ್ಯಾಮತಿ ತಾಲ್ಲೂಕಿನ ಮರಿಗೊಂಡನಹಳ್ಳಿ ಶಿವರಾಜ್ ದೌರ್ಜನ್ಯದಡಿ ಕೊಲೆಯಾಗಿದ್ದು ಸರ್ಕಾರದ ಆದೇಶದಂತೆ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂದರು.
ಈಗಾಗಲೇ ಡಾಕ್ಯಾನಾಯ್ಕ್ ಕುಟುಂಬದವರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು ಉಳಿದ ಇಬ್ಬರಿಂದ ದಾಖಲೆಗಳನ್ನು ಪಡೆದು ಸರ್ಕಾರಕ್ಕೆ ಕಳುಹಿಸಲು ಇವರ ಸಹಾಯಕ್ಕಾಗಿ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಗಿದ್ದು ಆದಷ್ಟು ಬೇಗ ಇವರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ನೆರವು ನೀಡಲಾಗುತ್ತದೆ. ಇತ್ತೀಚೆಗೆ ಕೊಲೆಯಾದ ಮಾರಿಗೊಂಡನಹಳ್ಳಿ ಶಿವರಾಜ್ ಮನೆಗೆ ಭೇಟಿ ನೀಡಿದ್ದು ಅತ್ಯಂತ ಸಂಕಷ್ಟದಲ್ಲಿದ್ದಾರೆ, ಇವರಿಗೆ ಆದಷ್ಟು ಬೇಗ ಸರ್ಕಾರದ ಸವಲತ್ತನ್ನು ತಲುಪಸಿಬೇಕಾಗಿದೆ ಎಂದರು.
ದೌರ್ಜನ್ಯ ಪ್ರಕರಣದಡಿ ಈ ವರ್ಷ ಒಟ್ಟು 60 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 3 ಕೊಲೆ, 8 ಅತ್ಯಾಚಾರ, 49 ಇತರೆ ದೌರ್ಜನ್ಯದ ಪ್ರಕರಣಗಳಾಗಿವೆ. ಇದರಲ್ಲಿ 28 ಕ್ಕೆ ಚಾರ್ಜ್ಶೀಟ್ ಸಲ್ಲಿಕೆಯಾಗಿವೆ, ಎಫ್ಐಆರ್ ಹಂತದಲ್ಲಿ ರೂ. 38.70 ಲಕ್ಷ ಮತ್ತು ಚಾರ್ಜ್ಶೀಟ್ ಹಂತದಲ್ಲಿ ರೂ.79.88 ಲಕ್ಷ ಸೇರಿ 1.18 ಕೋಟಿ ಪರಿಹಾರ ನೀಡಿದ್ದು 66 ಪರಿಶಿಷ್ಟ ಜಾತಿ, 56 ಪರಿಶಿಷ್ಟ ಪಂಗಡರವರು ಸೇರಿ 122 ಸಂತ್ರಸ್ಥರಿಗೆ ಪರಿಹಾರ ಒದಗಿಸಲಾಗಿದೆ.
ದೌರ್ಜನ್ಯ ತಡೆ ಕಾಯ್ದೆಯಡಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 2024 ತ ಜುಲೈನಲ್ಲಿ 144, ಆಗಸ್ಟ್ ನಲ್ಲಿ 147, ಸೆಪ್ಟೆಂಬರ್ನಲ್ಲಿ 145 ಪ್ರಕರಣಗಳಿದ್ದು ಈ ಮೂರು ತಿಂಗಳ ಅವಧಿಯಲ್ಲಿ 10 ಪ್ರಕರಣಗಳು ವಿಲೆಯಾಗಿವೆ. ಪ್ರಸ್ತುತ ಸೆಪ್ಟೆಂಬರ್ ಅಂತ್ಯಕ್ಕೆ 143 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದು ಇದರಲ್ಲಿ 2018 ರ 1, 2019 ರ 3, 2020 ರ 20, 2021 ರಲ್ಲಿನ 14, 2022 ರ ಅವಧಿಯ 32, 2023 ರಲ್ಲಿನ 49 ಮತ್ತು 2024 ರಲ್ಲಿನ 34 ಪ್ರಕರಣಗಳಿವೆ. ಚಾರ್ಜ್ಶೀಟ್ ಹಾಕದಿರುವ ಪ್ರಕರಣಗಳಲ್ಲಿ ಕೂಡಲೇ ಚಾರ್ಜ್ಶೀಟ್ ಹಾಕಲು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಸಮಿತಿ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.



