ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಹರೋಸಾಗರ ಹಾಗೂ ಕೋಟೆಹಾಳ್ ಗ್ರಾಮದ ಮನೆಗಳು ಹಾಗೂ ದೇವಸ್ಥಾನ ಹುಂಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 12.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ನಗದು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಬಸವಾಪಟ್ಟಣ ನಿವಾಸಿ, ಹಾಲಿ ಚಿಕ್ಕಮಗಳೂರಲ್ಲಿ ನೆಲೆಸಿರುವ ಸಂಜಯ್ @ ಅದ್ದೂರಿ ಹನುಮಂತ ಹಾಗೂ ಚನ್ನಗಿರಿಯ ಮಂಜುನಾಥ@ ಎಲೆಮಾರಿ ಮಂಜ ಬಂಧಿತ ಆರೋಪಿಗಳು.ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.ಈ ಇಬ್ಬರ ವಿರುದ್ಧ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಪ್ರಕರಣಗಳು, ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಪ್ರಕರಣಗಳು ಹಾಗೂ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಪ್ರಕರಣ ದಾಖಲಾಗಿವೆ. ಆರೋಪಿತರಿಂದ 10 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ 2.5 ಲಕ್ಷ ಮೌಲ್ಯದ ಮೋಟಾರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಪಿಐ ಲಿಂಗನಗೌಡ ನೆಗಳೂರು, ಪಿಎಸ್ಐ ವೀಣಾ, ಸಿಬ್ಬಂದಿಯಾದ ರುದ್ರೇಶ, ಸತೀಶ, ವೀರಭದ್ರಪ್ಪ, ಗುರುಬಸಪ್ಪ, ಪರಶುರಾಮ, ಇಬ್ರಾಹಿಂ, ತಿಪ್ಪೇಶ್ ಓಲೆಕಾರ್, ಸಿಪಿಸಿ ತಿಮ್ಮರಾಜು, ರವಿ, ಗಣಕ ಯಂತ್ರ ವಿಭಾಗದ ರಾಘವೇಂದ್ರ, ಶಾಂತರಾಜ್ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಪ್ರಕರಣ ಬೇಧಿಸಲು ಯಶಸ್ವಿಯಾಗಿರುವ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯ ಕುಮಾರ್, ಎಂ.ಸಂತೋಷ್, ಹೆಚ್ಚುವರಿ ಎಸ್ಪಿ ಜಿ.ಮಂಜುನಾಥ್, ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.