ಯಾದಗಿರಿ: ಕುಟುಂಬ ಕಲಹದಿಂದ ದೂರವಾಗಿದ್ದ ಮಗಳನ್ನು ನ್ಯಾಯ ಪಂಚಾಯಿತಿ ಮೂಲಕ ಹೊಂದಾಣಿಕೆ ಮಾಡಿ ಮಗಳನ್ನು ಗಂಡನ ಮನೆಗೆ ಬಿಡಲು ಹೋಗಿದ್ದ ಅತ್ತೆ, ಮಾವ ಹಾಗೂ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ಯಾದಗಿರಿ ತಾಲ್ಲೂಕಿನ ಮುನಗಾಲದಲ್ಲಿ ನಡೆದಿದೆ.
ಗಂಡ ಮನೆಗೆ ಬಿಡಲು ದಾವಣಗೆರೆಯಿಂದ ಪೋಷಕರು ಬಂದಿದ್ದರು. ಈ ವೇಳೆ ಕಬ್ಬಿಣದ ರಾಡ್ ಹಾಗೂ ಚಾಕುನಿಂದ ಮೂವರನ್ನು ಕೊಲೆ ಮಾಡಲಾಗಿದೆ.ಮುನಗಾಲ ಗ್ರಾಮದ ನಿವಾಸಿ ನವೀನ್ ದೇವಿಂದ್ರಪ್ಪ (35) ಎಂಬಾತನು ತನ್ನ ಕುಟುಂಬದಲ್ಲಿ ಉಂಟಾದ ಕಲಹದಿಂದಾಗಿ ಪತ್ನಿ, ಅತ್ತೆ, ಮಾವನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಂದು (ಜು.18) ನಡೆದಿದೆ.
ದಾವಣಗೆರೆ ಮೂಲದ ನವೀನ್ ಪತ್ನಿ ಅನ್ನಪೂರ್ಣ (25), ಅತ್ತೆ ಕವಿತಾ (45) ಮಾವ ಬಸವರಾಜಪ್ಪ (52) ಕೊಲೆಯಾದ ದುರ್ದೈವಿಗಳು. ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ದಾವಣಗೆರೆ ಮೂಲದ ಅನ್ನಪೂರ್ಣಳನ್ನು ನವೀನ್ ಮದುವೆಯಾಗಿದ್ದ. ಅನ್ನಪೂರ್ಣ ಮತ್ತು ನವೀನ್ ದಂಪತಿಗೆ ಒಂದು ಹೆಣ್ಣು ಮಗು ಸಹ ಇದೆ.
ಕಳೆದ ಒಂದು ವರ್ಷದ ಹಿಂದೆ ಗಂಡನ ಕಿರುಕುಳ ತಾಳದೆ ಅನ್ನಪೂರ್ಣ ತವರು ಮನೆಗೆ ಬಂದಿದ್ದಳು. ಒಂದು ವರ್ಷದಿಂದ ತಂದೆ, ತಾಯಿ ಜೊತೆಗಿದ್ದ ಅನ್ನಪೂರ್ಣ, ನ್ಯಾಯ ಪಂಚಾಯಿತಿ ಮಾಡಿ ಮತ್ತೆ ಜೊತೆಗಿರಲು ಒಪ್ಪಿದ್ದರು. ಇದರಿಂದ ಮಗಳನ್ನು ಗಂಡ ಮನೆಗೆ ಬಿಡಲು ದಾವಣಗೆರೆಯಿಂದ ಅನ್ನಪೂರ್ಣ ಪೋಷಕರು ಬುಧವಾರ ಬಂದಿದ್ದರು. ಗುರುವಾರ ಕಬ್ಬಿಣದ ರಾಡ್ ಹಾಗೂ ಚಾಕುನಿಂದ ಮೂವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೊಲೆ ಮಾಡಿ ವಡಗೇರಾ ತಾಲ್ಲೂಕಿನ ಜೋಳದಡಗಿ ಬಳಿ ಶವ ಬಿಸಾಡಿದ್ದನು. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.