ದಾವಣಗೆರೆ: ಜಿಲ್ಕೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮತ್ತು ಮುದ್ದೇನಹಳ್ಳಿ, ಪಾಂಡೋಮಟ್ಟಿ ಗ್ರಾಮಗಳಲ್ಲಿ ₹2.20 ಲಕ್ಷ ಬೆಲೆಬಾಳುವ ನಾಲ್ಕುವರೆ ಕ್ವಿಂಟಲ್ ಅಡಕೆ, ದೇವರಹಳ್ಳಿ ಗ್ರಾಮದ ಹಣ ಸುಲಿಗೆ ಕೇಸ್ನ ₹30 ಸಾವಿರ ಹಾಗೂ ಕಳ್ಳತನಕ್ಕೆ ಬಳಸಿದ್ದ ₹2 ಲಕ್ಷ ಮೌಲ್ಯದ ಓಮಿನಿ ವಾಹನ ಸೇರಿ ಒಟ್ಟು ₹4.50 ಲಕ್ಷ ಮೌಲ್ಯದ ಕಳವು ಮಾಡಿದ ವಸ್ತುಗಳನ್ನು ಚನ್ನಗಿರಿ ಪೊಲೀಸರು ಮೂವರು ಆರೋಪಿಗಳು ಸಹಿತ ವಶಪಡಿಸಿಕೊಂಡಿದ್ದಾರೆ.
ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಮಹಮ್ಮದ್ ಶಬೀಉಲ್ಲಾ, ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾಗ ಬಾಲಕ ಹಾಗೂ ಶೇಕ್ ಮುಕ್ತಿಯಾರ್ ಆಲಿ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೇವರಹಳ್ಳಿ ಗ್ರಾಮ ಗೊರಪ್ಪ (80) ಎಂಬುವವರ ಮನೆಯಲ್ಲಿ ಬೆಳಗ್ಗಿನ ಜಾವ 02ಗಂಟೆಯ ಸಮಯದಲ್ಲಿ ಆರೋಪಿತರು ಮನೆಯ ಬೀಗ ಮುರಿದು ಒಳ ಪ್ರವೇಶ ಮಾಡಿ ಗಾಡ್ರೇಜ್ ಮುರಿಯುತ್ತಿರುವಾಗ ಅದೇ ಸಮಯಕ್ಕೆ ದೂರುದಾರ ಕೂಗಿಕೊಂಡಾಗ ಆರೋಪಿತರು ಮನೆಯಿಂದ ಓಡಿ ಹೋಗಿದ್ದು, ನಂತರ ಮನೆಯ ಗಾಡ್ರೇಜ್ ನಲ್ಲಿದ್ದ ಹಣ ತೆಗೆದುಕೊಂಡು ಕೈಯಲ್ಲಿ ಹಿಡಿದುಕೊಂಡು ಎಣಿಸುತ್ತಿರುವಾಗ ಆರೋಪಿತರು ತಾವು ಬಿಟ್ಟು ಹೋದ ಮೊಬೈಲ್ ನ್ನು ತೆಗೆದುಕೊಂಡು ಹೋಗಲು ಪುನಃ ಮನೆಯ ಒಳಗೆ ಬಂದು ಕೈಯಲ್ಲಿದ್ದ 2,00,000/- ರೂಪಾಯಿ ಹಣವನ್ನು ಕಿತ್ತುಕೊಂಡು ಹೋಗಿರುತ್ತಾರೆ ಎಂದು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್, ಡಿವೈಎಸ್ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸಪೆಕ್ಟರ್ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಮಿಂಚಿನ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.ಆರೋಪಿಗಳನ್ನು ಪತ್ತೆ ಮಾಡಿದ ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.



