ದಾವಣಗೆರೆ: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಚಿನ್ನದ ಗಟ್ಟಿ, 395 ಗ್ರಾಂ ಒಡವೆ, ಹಿತ್ತಾಳೆ ಹಂಡೇವು ಸೇರಿದಂತೆ 90 ಸಾವಿರ ಮೌಲ್ಯದ ಸ್ವತ್ತನ್ನು ಗಾಂಧಿನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆಯ ಲಂಬು ದಾದು ಹಾಗೂ ಹುಸೇನಿ ಬಂಧಿತರು. ಸಿದ್ದರಾಮೇಶ್ವರ ಬಡಾವಣೆಯ ಬಟ್ಟಿ ಲೇಔಟ್ನ ಸುಧಾ ಎಂಬುವರ ಮನೆಯಲ್ಲಿ ಜೂ.7ರಂದು ರಾತ್ರಿ 15 ಗ್ರಾಂ ಚಿನ್ನಹಾಗೂ 450 ಗ್ರಾಂ ಬೆಳ್ಳಿ ಒಡವೆ ಕಳ್ಳತನ ಮಾಡಿರುವ ಬಗ್ಗೆ ದೂರು ನೀಡಿದ್ದರು.
ಎಎಸ್ಪಿ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ನಗರ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಗಾಂಧಿ ನಗರ ವೃತ್ತ ನಿರೀಕ್ಷಕ ಟಿ.ಆರ್. ನಹೀಂ ಅಹಮ್ಮದ್ ಮಾರ್ಗದರ್ಶನದಲ್ಲಿ ಎಸ್ಐ ಆರ್.ಜೆ. ಹಿರೇಮಠ ನೇತೃತ್ವದಲ್ಲಿ ಸಿಬ್ಬಂದಿ ಒಳಗೊಂಡ ತಂಡ ಲಂಬು ದಾದು ಹಾಗೂ ಹುಸೇನಿಯನ್ನು ಬಂಧಿಸಿ, 8 ಗ್ರಾಂ 260 ಮಿಲಿ ಗ್ರಾಂ ಚಿನ್ನದ ಗಟ್ಟಿ, 395 ಗ್ರಾಂ ಬೆಳ್ಳಿಯ ಒಡವೆ ಹಾಗೂ 5 ಸಾವಿರ ಮೌಲ್ಯದ ಹಿತ್ತಾಳೆಯ ಹಂಡೇವು ಸೇರಿದಂತೆ 90 ಸಾವಿರ ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ಲಂಬು ದಾದು ವಿರುದ್ಧ ಜಗಳೂರು, ವಿದ್ಯಾ ನಗರ, ಆಜಾದ್ ನಗರ ಸೇರಿ ಇತರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.
ಗಾಂಧಿ ನಗರ ಪಿಎಸ್ಐ ಆರ್.ಜೆ. ಹಿರೇಮಠ ನೇತೃತ್ವದಲ್ಲಿ ಎಎಸ್ಐ ಮಹಮ್ಮದ್ ಖಾನ್, ಮಾರುತಿ, ಖಾಜಾ ಹುಸೇನಿ ಅತ್ತಾರ್, ಷಫೀವುಲ್ಲಾ ಸಿದ್ಧಿಕ್ ಅಲಿ, ಬತ್ತೇರ ಮಾರುತಿ, ಎಲ್.ಗಿರಿಧರ, ಲಕ್ಷ್ಮೀದೇವಿ, ಹನುಮಂತಪ್ಪ, ಎಸ್ಪಿ ಕಚೇರಿಯ ನಿರೀಕ್ಷಕ ಇಸ್ಮಾಯಿಲ್ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ಈ ತಂಡದ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



