ದಾವಣಗೆರೆ: ರಾಜ್ಯ ಸರ್ಕಾರ ಮಹಿಳೆಯರಿಗೆ ಫ್ರೀ ಯೋಜನೆ ಜಾರಿ ತಂದಾಗಿನಿಂದ ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ಸೀಟ್ ಹಿಡಿಯೋದು ತುಂಬಾ ಕಷ್ಟ. ಹೀಗಾಗಿ ಮಹಿಳೆಯರು ಸೀಟ್ ಹಿಡಿಯೋದಕ್ಕೆ ಬ್ಯಾಗ್, ಕರ್ಚೀಫ್, ವ್ಯಾನಿಟಿ ಬ್ಯಾಗ್ ಗಳನ್ನು ಕಿಟಕಿಯಿಂದ ಸೀಟ್ ಮೇಲೆ ಹಾಕುವುದು ಸಾಮಾನ್ಯವಾಗಿದೆ. ಇಲ್ಲೊಬ್ಬ ಮಹಿಳೆ ಕಿಟಕಿಯಿಂದ ವ್ಯಾನಿಟಿ ಬ್ಯಾಗ್ ಹಾಕಿ, ಹತ್ತುವುದರಲ್ಲಿ 1.80 ಲಕ್ಷ ಮೌಲ್ಯದ ಚಿನ್ನದ ಸರ, ಮೊಬೈಲ್ ಕಳೆದುಕೊಂಡ ಘಟನೆ ನಡೆದಿದೆ.
2023ರ ಮಾರ್ಚ್ 24ರಂದು ಚನ್ನಗಿರಿಯ ಮಮತಾ ಎನ್ನುವವರು ಸಂಬಂಧಿಕರ ಗೃಹ ಪ್ರವೇಶ ಕಾರ್ಯಕಮದ ಪ್ರಯುಕ್ತ ದಾವಣಗೆರೆ ತಾಲೂಕಿನ ಹೆಚ್. ಕಲಪನಹಳ್ಳಿ ಗ್ರಾಮಕ್ಕೆ ಬಂದು ಊರಿಗೆ ವಾಪಸ್ ಹೋಗುವಾಗ ಸಂಜೆ 4.15ರ ಸುಮಾರಿಗೆ ದಾವಣಗೆರೆ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ಹತ್ತಲು ತುಂಬಾ ಜನ ಇದ್ದ ಕಾರಣ ಸೀಟ್ ಹಿಡಿಯಲು ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ಸೀಟ್ ಮೇಲೆ ಹಾಕಿ ಬಸ್ ಒಳಗೆ ಹೋಗಿ ನೋಡಿದಾಗ ವ್ಯಾನಿಟಿ ಬ್ಯಾಗ್ ಇರಲಿಲ್ಲ.ವ್ಯಾನಿಟಿ ಬ್ಯಾಗ್ ನಲ್ಲಿದ್ದ ಸುಮಾರು 35 ಗ್ರಾಂ ತೂಕದ ಬಂಗಾರದ ಲಾಂಗ್ ಚೈನ್ ಅಂದಾಜು ಮೌಲ್ಯ 1,80,000, ವಿವೋ ವೈ-12 ಮೊಬೈಲ್ ಕಳ್ಳತನವಾಗಿದೆ ಎಂದು ಬಡಾವಣೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ ವಿಜಯ ಕುಮಾರ್ ಹಾಗೂ ಜಿ. ಮಂಜುನಾಥ, ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶನಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಎಂ. ಆರ್. ಚೌಬೆ ನೇತೃತ್ವದ ಪೊಲೀಸ್ ತಂಡವು ಆರೋಪಿಗೆ ಹುಡುಕಾಟ ನಡೆಸಿತ್ತು. ದಾವಣಗೆರೆ ನಗರದ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ನಲ್ಲಿ ಬಾತ್ಮಿದಾರರ ಮಾಹಿತಿ ಮೇರೆಗೆ ಈ ಪ್ರಕರಣದ ಆರೋಪಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿವು ಕುಮಾರ ಕೆ.ಸಿ. (56) ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ವಿಚಾರಣೆ ಮಾಡಿದಾಗ 35 ಗ್ರಾಂ ತೂಕದ ಬಂಗಾರದ ಲಾಂಗ್ ಚೈನ್, ವಿವೋ ವೈ 12 ಮೊಬೈಲ್ ಅನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಈ ಆರೋಪಿಯನ್ನು ಬಂಧಿಸಿ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ನಡೆಸಿದ ಪಿಎಸ್ಐ ರಮೇಶ್, ಎಎಸ್ಐ ರಾಜಪ್ಪ, ಸಿಬ್ಬಂದಿ ಅರುಣ ಕುಮಾರ, ಕೆಂಚಪ್ಪ, ಸೈಯದ್ ಅಲಿ, ವಿಶ್ವ ಕುಮಾರ್, ಹುನುಮಂತಪ್ಪ, ಗೀತಾ ಹೆಚ್. ಅವರನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



