ದಾವಣಗೆರೆ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ತಯಾರಿಸಿದ ಮಧ್ಯಾಹ್ನದ ಬಿಸಿಯೂಟದ ಅಡುಗೆಯನ್ನು ಅಡುಗೆ ಸಹಾಯಕಿಯೊಬ್ಬರು ತಮ್ಮ ತೋಟದ ಕೆಲಸಕ್ಕೆ ಬಂದ ಕೂಲಿ ಕಾರ್ಮಿಕರಿಗೆ ಕಳುಹಿಸಿ, ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಗ್ರಾಮಸ್ಥರು ಬಿಇಒ ದೂರು ನೀಡಿದ್ದರು. ಅಡುಗೆ ಸಹಾಯಕಿ ಗೀತಾ ಈ ಕೃತ್ಯ ಎಸಗಿದ್ದರು. ಊರಿನ ಗ್ರಾಮಸ್ಥರ ದೂರಿನ ಅನ್ವಯ ಬಿಇಒ ಎಸ್.ಸಿ. ನಂಜರಾಜ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರುದ್ರಪ್ಪ
ಅವರೊಂದಿಗೆ ಶಾಲೆಗೆ ಭೇಟಿ ನೀಡಿ, ಗ್ರಾಮಸ್ಥರು ಮತ್ತುಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು.
ಅಡುಗೆ ಸಹಾಯಕಿ ಗೀತಾ ವಿಚಾರಣೆ ನಡೆಸಿದಾಗ ತನ್ನ ತಪ್ಪು ಒಪ್ಪಿಕೊಂಡಿದ್ದಾರೆ. ಮನೆಯಲ್ಲಿ ಅಡುಗೆ ಮಾಡಲು ಬೇರೆ ಯಾರೂ ಇರಲಿಲ್ಲ. ತೋಟಕ್ಕೆ ಕೂಲಿ ಕಾರ್ಮಿಕರಿಗೆ ಅನಿವಾರ್ಯವಾಗಿ ಊಟ ಕಳುಹಿಸಬೇಕಿತ್ತು. ಹೀಗಾಗಿ ಬಿಸಿಯೂಟ ಯೋಜನೆಯ ಅಡುಗೆ ಕಳುಹಿಸಿದ್ದೇನೆ. ಮುಂದೆ ಇಂತಹ ತಪ್ಪು ಆಗವುದಿಲ್ಲ ಎಂದು ತಪ್ಪೋಪ್ಪಿಗೆ ಪತ್ರ ನೀಡಿದ್ದಾರೆ ಎಂದು ಬಿಇಒ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಕೂಬ್ಯಾನಾಯ್ಕ, ಗ್ರಾಪಂ ಮುಖಂಡರು ಇದ್ದರು.



