ದಾವಣಗೆರೆ: ನಗರದ ಹೊರ ವಲದಲ್ಲಿ ಲಾರಿ ಚಾಲಕನಿಗೆ ಚಾಕು ತೋರಿಸಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿದಂತೆ ಮೂವರನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ.
ಹಳೇ ಬಾತಿಯ ಸಮೀಪ ಹೆದ್ದಾರಿಯಲ್ಲಿ ಲಾರಿ ಚಾಲಕನಿಗೆ ಚಾಕು ತೋರಿಸಿ ಹಣ ವಸೂಲಿ ಮಾಡಿದ್ದರು.ಬೂದಾಳ್ ರಸ್ತೆಯ ಶರತ್ ಕುಮಾರ್ (20) ಹಾಗೂ ಕಾನೂನು ಸಂಘರ್ಷಕ್ಕೆ ಇಬ್ಬರು ಬಾಲಕರು ಬಂಧಿತರಾಗಿದ್ದಾರೆ. ಬಂಧಿತರಿಂದ ಸುಲಿಗೆ ಮಾಡಿದ 65,000 ಮೌಲ್ಯದ 3 ಮೊಬೈಲ್ಗಳು, 1650 ನಗದು ಮತ್ತು ಕೃತ್ಯಕ್ಕೆ ಬಳಸಿದ 80,000 ಮೌಲ್ಯದ ಡಿಯೋ ಸ್ಕೂಟರ್ ಅ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಬಾಲ ಮಂದಿರಕ್ಕೆ ಬಿಡಲಾಗಿದೆ.
ಲಾರಿ ಚಾಲಕ ಮಾರುತಿ ಎಂಬುವವರು ಜುಲೈ 12ರಂದು ಸರಕು ತುಂಬಿದ ಲಾರಿಯನ್ನು ಬೆಳಗಾವಿಯಿಂದ ಬೆಂಗಳೂರಿಗೆ ಚಲಾಯಿಸಿಕೊಂಡು ಪುಣೆ ಬೆಂಗಳೂರು ಮಾರ್ಗವಾಗಿ ಹೋಗುತ್ತಿದ್ದಾಗ ಮಧ್ಯರಾತ್ರಿ 1ಗಂಟೆ ಸಮಯದಲ್ಲಿ ಹಳೇ ಬಾತಿ ಹತ್ತಿರ ಹೈವೇ ರಸ್ತೆಯಲ್ಲಿ ಪಂಕ್ಚರ್ ಆಯಿತು. ಲಾರಿಯನ್ನು ನಿಲ್ಲಿಸಿಕೊಂಡು ನಿಂತಿರುವಾಗ ಬೈಕ್ನಲ್ಲಿ ಬಂದ ಈ ಮೂವರು ಚಾಕು ತೋರಿಸಿ ಹೆದರಿಸಿ ಮಾರುತಿ ಅವರ ಬಳಿ ಇದ್ದ 2,500 ನಗದು ಹಾಗೂ 25,000 ಬೆಲೆಯ ವಿವೋ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು.
ಎಎಸ್ಪಿ ಅರ್.ಬಿ. ಬಸರಗಿ ಹಾಗೂ ಗ್ರಾಮಾಂತರ ಉಪ-ವಿಭಾಗದ ಎಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿಐ ಲಿಂಗನಗೌಡ ನೆಗಳೂರ, ಪಿಎಸ್ಐ ಎ.ಆರ್. ಮುಂದಿನ ಮನಿ ಮತ್ತು ಸಿಬ್ಬಂದಿ ದೇವೇಂದ್ರ ನಾಯ್ಕ, ಅಣ್ಣಯ್ಯ, ಮಹಮ್ಮದ್ ಯೂಸುಫ್, ವೀರೇಶ್, ಮಂಜನಾಯ್ಕ, ಅನಿತಾಬಾಯಿ ಕೆ.ಆರ್. ಮತ್ತು ಜೀಪ್ ಚಾಲಕ ಅಜ್ಜಯ್ಯ ಅವರ ತಂಡ ಆರೋಪಿಗಳನ್ನು ಬಂಧಿಸಿದ್ದರು. ಈ ಕಾರ್ಯಾಚರಣೆಯನ್ನು ಎಸ್ಪಿ ಡಾ.ಕೆ. ಅರುಣ್ ಶ್ಲಾಘಿಸಿದ್ದಾರೆ.



