ದಾವಣಗೆರೆ: ಅಡಿಕೆ ಖೇಣಿ ಕೊಟ್ಟಿದ್ದ ರೈತರಿಗೆ 20 ಲಕ್ಷ ಕೊಡಲು ಬಂದಿದ್ದವರ ಮೇಲೆ ಕಾರದ ಪುಡಿ ಎರಚಿ ದರೋಡೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ನಗದು ಸಹಿತ 24 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಏ.11 ರಂದು ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಹೆಚ್-48 ಸರ್ವೀಸ್ ರಸ್ತೆ,ಪಿ.ಬಸವನಗೌಡ ಬಡಾವಣೆ ಬ್ರೀಡ್ಜ್ ಹತ್ತಿರ ಭದ್ರಾವತಿಯ ದೇವರಾಜ್ ರವರು ಅಡಿಕೆ ಖೇಣಿ ಪಡೆದುಕೊಂಡಿದ್ದ ರೈತರಿಗೆ ಹಣವನ್ನು ಕೊಡಲು 20 ಲಕ್ಷ ನಗದು ಹಣವನ್ನು ತನ್ನ ಸ್ನೇಹಿತನಿಂದ ಪಡೆದುಕೊಂಡು ಆಟೋದಲ್ಲಿ ಹೋಗುತ್ತಿರುವಾಗ ಯಾರೋ 05 ಜನ ಅಪರಿಚಿತರು ಮಚ್ಚಿನಿಂದ ಆಟೋ ಗ್ಲಾಸ್ ಹೊಡೆದು ಕಣ್ಣಿಗೆ ಕಾರದ ಪುಡಿ ಎರಚಿ 20 ಲಕ್ಷ ನಗದು ಹಣ ಇದ್ದ ಬ್ಯಾಗನ್ನು ದೋಚಿಕೊಂಡು ಹೋಗಿರುತ್ತಾರೆಂದು ನೀಡಿದ ದೂರನ್ನು ಸ್ವೀಕರಿಸಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದಲ್ಲಿ ನಗದು ಹಣ ಮತ್ತು ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪ್ರಭಾವತಿ ಸಿ ಶೇತಸನದಿ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿದ್ದು. ಈ ತಂಡ ಆರೋಪಿತರಾದ ಆಂಜನೇಯ ಕಾಟನ್ ಮಿಲ್ ನಿವಾಸಿಗಳಾದ 1] ಸನಾವುಲ್ಲಾ @ ಸನಾ 2] ಸೈಫುಲ್ಲಾ @ ಸೈಫು ಮತ್ತು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿತರಿಂದ ದರೋಡೆ ಮಾಡಿದ್ದ 19 ಲಕ್ಷದ 80 ಸಾವಿರ ನಗದು ಹಣ ಮತ್ತು ಕೃತಕ್ಕೆ ಬಳಿಸಿದ 01ಲಕ್ಷ 20 ಸಾವಿರ ಬೆಲೆಬಾಳುವ ಒಂದು ಪ್ಯಾಸೆಂಜರ್ ಆಟೋ ಮತ್ತು 02ಲಕ್ಷ ಬೆಲೆ ಬಾಳುವ ಒಂದು ಮಹೀಂದ್ರಾ ಸುಪ್ರೋ ಪ್ಯಾಸೆಂಜರ್ ಆಟೋ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಲೆಮರಿಸಿಕೊಂಡಿರುವ ಆರೋಪಿತರ ಪತ್ತೆಕಾರ್ಯ ಪ್ರಗತಿಯಲ್ಲಿದೆ. ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ತಂಡಕ್ಕೆ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ ಬಸರಗಿ ಶ್ಲಾಘಿಸಿದ್ದಾರೆ.



