ದಾವಣಗೆರೆ: ನಡತೆ ಶಂಕಿಸಿ ಪತ್ನಿ ಹತ್ಯೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ದಾವಣಗೆರೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದ
ಶಫೀವುಲ್ಲಾ(50 ವರ್ಷ) ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ಶಫೀವುಲ್ಲಾತನ್ನ ಪತ್ನಿ ರಮೀಜಾ ಬೀ ಶೀಲದ ಬಗ್ಗೆ ಶಂಕಿಸಿ, 21.2.2022ರಂದು ಆಕೆ ಬಹಿರ್ದೆಸೆಗೆ ಹೊರಗೆ ಹೋಗಿದ್ದ ವೇಳೆ ಹಿಂಬಾಲಿಸಿಕೊಂಡು ಹೋಗಿ,ಚಾಕುವಿನಿಂದ ಇರಿದು ಕೊಂದಿದ್ದನು. ಹೊನ್ನಾಳಿ
ಪೊಲೀಸ್ ಠಾಣೆಗೆ ಮೃತಳ ಪುತ್ರ ಅತಾವುಲ್ಲಾ ತನ್ನ ತಂದೆ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ
ಆಗಿನ ವೃತ್ತ ನಿರೀಕ್ಷಕ, ತನಿಖಾಧಿಕಾರಿ ಟಿ.ವಿ.ದೇವರಾಜ ರಮೀಜಾ ಬೀ ಕೊಲೆ ಪ್ರಕರಣ ಬೇಧಿಸಿ,ನ್ಯಾಯಾಲಯಕ್ಕೆ ಆರೋಪಿ ಶಫೀವುಲ್ಲಾ ವಿರುದ್ಧದ ದೋಷಾರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಾದ, ಪ್ರತಿವಾದ ಆಲಿಸಿದ ದಾವಣಗೆರೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೆ.ವಿ.ವಿಜಯಾನಂದ ಅವರು ಆರೋಪಿ ಶಫೀವುಲ್ಲಾ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರು. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ.



