ದಾವಣಗೆರೆ: ದಂತ ವೈದ್ಯಾಧಿಕಾರಿಗಳ ಹುದ್ದೆ ಕೊಡಿಸುವುದಾಗಿ ವೈದ್ಯರಿಂದಲೇ ಇಬ್ಬರು ದಂತ ವೈದ್ಯರಿಗೆ 7.54 ಲಕ್ಷ ವಂಚನೆ ಪ್ರಕರಣ ನಡೆದಿದೆ. ಈ ಬಗ್ಗೆ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದೆ.
ದಾವಣಗೆರೆ ತಾಲ್ಲೂಕಿನ ಹೂವಿನಮಡು ಗ್ರಾಮದ ವೈದ್ಯಾಧಿಕಾರಿ ಡಾ. ಭುವನೇಶ್ ನಾಯ್ಕ ಹಾಗೂ ಕಾಲೇಜ್ ಆಫ್ ಡೆಂಟಲ್ ಸೈನ್ಸ್ನ ಉಪನ್ಯಾಸಕ ಡಾ.ಸತ್ಯಪ್ರಸಾದ್ ಎಂಬುವರು, ಹೊಳಲ್ಕೆರೆಯ ಸಂತೋಷ್ ದಂತ ಚಿಕಿತ್ಸಾಲಯದ ವೈದ್ಯ ಡಾ.ಕೆ.ವಿ. ಸಂತೋಷ್ ಹಾಗೂ ವೈದ್ಯ ಡಾ.ಮಹಮದ್ ಇಮ್ರಾನುಲ್ಲಾ ಎಂಬುವರಿಗೆ ವಂಚನೆ ಮಾಡಿದ್ದಾರೆ.
ಸರ್ಕಾರದಿಂದ 2020 ಸೆಪ್ಟೆಂಬರ್ನಲ್ಲಿ ದಂತ ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ದಂತ ವೈದ್ಯರು ಅರ್ಜಿ ಸಲ್ಲಿಸಿದ್ದರು. ನನಗೆ ರಾಜಕೀಯ ನಾಯಕರ ಸಂಪರ್ಕವಿದೆ ಎಂದು ಭುವನೇಶ್ ನಾಯ್ಕ್, ಹುದ್ದೆ ಕೊಡಿಸಲು ಸತ್ಯಪ್ರಸಾದ್ ಮೂಲಕ 5 ಲಕ್ಷಕ್ಕೆ ಬೇಡಿಕೆ ಇಟ್ಡಿದ್ದರು.
ಜಿಲ್ಲಾ ಕ್ರೀಡಾಂಗಣ ಹಿಂಭಾಗದ ರಸ್ತೆಯಲ್ಲಿ ಸಂತೋಷ್ ಅವರಿಂದ 3 ಲಕ್ಷ ಹಾಗೂ ಮಹಮದ್ ಇಮ್ರಾನ್ ಉಲ್ಲಾ ಅವರಿಂದ 2.50 ಲಕ್ಷವನ್ನೂ ಭುವನೇಶ್ ಹಾಗೂ ಸತ್ಯಪ್ರಸಾದ್ ವಸೂಲಿ ಮಾಡಿದ್ದರು. ನಕಲಿ ಆಯ್ಕೆ ಪಟ್ಟಿಯಲ್ಲಿ ಇಬ್ಬರು ದಂತ ವೈದ್ಯರ ಹೆಸರಿಸಿ ವಾಟ್ಸಾಪ್ ಮಾಡಿದ್ದರು. ಆ ಬಳಿಕ ಸಂತೋಷ್ ಅವರಿಂದ 1.54 ಲಕ್ಷ ಹಾಗೂ ಇಮ್ರಾನ್ ಉಲ್ಲಾ ಅವರಿಂದ 50 ಸಾವಿರ ವಸೂಲಿ ಮಾಡಿದ್ದರು. ಆದರೆ, ನೇಮಕಾತಿ ಪಟ್ಟಿ ಹೆಸರು ಇರಲಿಲ್ಲ. ಆಗ ಮೋಸ ಮಾಡಿರುವುದು ಗೊತ್ತಾಗಿದ್ದು, ಪ್ರಕರಣ ದಾಖಲಿಸಿದ್ದಾರೆ.



