ದಾವಣಗೆರೆ: ಯಾವುದೇ ದಾಖಲೆ ಹೊಂದಿರದ, ಆರ್ಟಿಒದಿಂದ ಪರವಾನಿಗೆ ಪಡೆಯದೇ ದಾವಣಗೆರೆಯಿಂದ ಪಂಜಾಬ್ಗೆ ಅಕ್ರಮವಾಗಿ ಟ್ರಾಕ್ಟರ್ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿರುವ ಮಳಿಗೆ ಮೇಲೆ ಜಿಲ್ಲಾ ಪೊಲೀಸರು ದಾಳಿ ಮಾಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿಸಿಆರ್ಬಿ ಘಟಕದ ಉಪಾಧೀಕ್ಷಕ ಬಿ. ಎಸ್. ಬಸವರಾಜ್ ಮತ್ತು ಅಧಿಕಾರಿ, ಸಿಬ್ಬಂದಿಗಳು ದಾವಣಗೆರೆ ನಗರದ ರೈತರ ಸಂಘದ ಕಾಂಪೌಂಡ್, ಬಿಲಾಲ್ ಕಾಂಪೌಂಡ್ ಬಳಿ ಇರುವ ಗ್ಯಾರೇಜುಗಳನ್ನು ಪರಿಶೀಲನೆ ಮಾಡಲಾಗಿದೆ. ಅಲ್ಲಿ ಹಳೇಯ ಟ್ರಾಕ್ಟರ್ಗಳನ್ನು ಪೈನಾನ್ಸ್, ಶೋರೂಂ ಮತ್ತು ರೈತರಿಂದ ಗ್ಯಾರೇಜ್ ಮಾಲೀಕರು ಖರೀದಿ ಮಾಡಿ ಅವುಗಳನ್ನು ಯಾವುದೇ ಮೂಲ ದಾಖಲಾತಿ ಪಡೆಯದೇ ಮತ್ತು ಸಾರಿಗೆ ಇಲಾಖೆಯಿಂದ ಸ್ಕ್ರಾಪ್ ಲೆಟರ್ ಪಡೆಯದೇ ಟ್ರಾಕ್ಟರ್ಗಳನ್ನು ಬಿಚ್ಚಿ ಪಂಜಾಬ್ ರಾಜ್ಯದ ಗುಜರಿ ಮಾಲೀಕರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಯಾವುದೇ ಗುಜರಿ ಅಂಗಡಿ ಮಾಲೀಕರು ನಿಯಮ ಬಾಹಿರವಾಗಿ ಟ್ರಾಕ್ಟರ್ಗಳನ್ನು ಖರೀದಿ ಮಾಡಿ ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯದೇ ಈ ರೀತಿ ಮಾರಾಟ ಮಾಡುವುದು ಅಕ್ರಮ ಹಾಗೂ ಕಾನೂನು ಬಾಹಿರವಾಗಿದ್ದರಿಂದ ಅವುಗಳನ್ನು ತಡೆದು ಆರ್ಟಿಒ ಅಧಿಕಾರಿ ಹಾಗೂ ಪೊಲೀಸರಿಂದ ವಿಚಾರಣೆ ನಡೆಸಲಾಗಿರುತ್ತದೆ.
ಆದ್ದರಿಂದ ಸಾರ್ವಜನಿಕರಿಗೆ ಸೂಚಿಸುವುದೇನೆಂದರೆ, ‘ಆರ್ಟಿಒ ಪರವಾನಿಗೆ ಮತ್ತು ಸಂಬಂಧಪಟ್ಟ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಎನ್ಒಸಿ ಪಡೆಯದೇ ಬೇರೆ ರಾಜ್ಯಗಳಿಗೆ ಅಥವಾ ಗುಜರಿಗೆ ನೀಡುವುದು ಕಾನೂನು ಬಾಹಿರವಾಗಿದ್ದು ಈ ರೀತಿ ಮಾಡಬಾರದೆಂದು’ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



