ದಾವಣಗೆರೆ: ಬಂಗಾರದ ಬಿಲ್ಲೆ ಎಂದು ನಂಬಿಸಿ, ನಕಲಿ ಬಂಗಾರ ಬಿಲ್ಲೆ ಕೊಟ್ಟು 4 ಲಕ್ಷ ವಂಚಿಸಿದ ಮೂವರು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.
ಹೊನ್ನಾಳಿಯ ಬಟ್ಟೆ ವ್ಯಾಪಾರಿ ನರಪತ್ ಸಿಂಗ್ ಅವರ ಅಂಗಡಿಗೆ ಬಂದ ಮೂರು ಜನ ದಾವಣಗೆರೆಯಲ್ಲಿ ಪೈಪ್ ಲೈನ್ ಕೆಲಸ ಮಾಡುವಾಗ ನಮಗೆ ಒಂದು ಗಡಿಗೆಯಲ್ಲಿ ಬಂಗಾರದ ಬಿಲ್ಲೆಗಳು ಸಿಕ್ಕಿರುತ್ತವೆ. ಅವುಗಳನ್ನು ನಿಮಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ನಂಬಿಸಿದ್ದಾರೆ. ದಾವಣಗೆರೆಗೆ ಕರೆಸಿ ಒಂದು ಕೆಜಿ ನಕಲಿ ಬಂಗಾರದ ಬಿಲ್ಲೆಗಳನ್ನು ಕೊಟ್ಟು ಐದು ಲಕ್ಷ ಹಣವನ್ನು ಪಡೆದಿದ್ದಾರೆ. ಬಿಲ್ಲೆಗಳು ನಕಲಿ ಎಂದು ಗೊತ್ತಾದ ಕೂಡಲೇ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ನರಪತ್ ಸಿಂಗ್ ಪ್ರಕರಣ ದಾಖಲಿಸಿದ್ದಾರೆ.
ಕೆಟಿಜೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಯನ್ನೋಳಗೊಂಡ ಪೊಲೀಸ್ ತಂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಮೂರು ಜನರನ್ನು ಬಂಧಿಸಿದ್ದಾರೆ. ಆರೋಪಿತರಿಂದ ನಾಲ್ಕು ಲಕ್ಷ ನಗದು ಹಣ, ಒಂದು ಕೆಜಿ ನಕಲಿ ಬಂಗಾರದ ಬಿಲ್ಲೆಗಳು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನಾಗೇಶ ಯು. ಐತಾಳ ಮತ್ತು ಕೆಟಿಜೆ ನಗರ ವೃತ್ತ ನಿರೀಕ್ಷಕ ಗುರು ಬಸವರಾಜ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಅಬ್ದುಲ್ ಖಾದರ್ ಜಿಲಾನಿ, ಪ್ರಭು ಡಿ ಕೆಳಗಿನ ಮನೆ ಹಾಗೂ ಸಿಬ್ಬಂದಿಗಳಾದ ಪ್ರಕಾಶ ಟಿ, ಗಿರೀಶ ಗೌಡ, ಎಮ್ ಮಂಜಪ್ಪ, ಷಣ್ಮುಖ ಕೆ, ದಾದಾಖಲಂದರ್ ರವರುಗಳು ರಾಘವೇಂದ್ರ, ಶಾಂತರಾಜ, ಉಮೇಶ ಬಿಸ್ನಾಳಾವರು ಭಾಗವಹಿಸಿದ್ದರು.



