ದಾವಣಗೆರೆ: ಕೊರೊನಾ ಮೇಲ್ವಿಚಾರಣೆಗಾಗಿ ಜಿಲ್ಲಾ ಕೋವಿಡ್ ಕಂಟ್ರೋಲ್ ರೂಮ್‍ ಆರಂಭ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

 ದಾವಣಗೆರೆ: ಕೋವಿಡ್ 19 ಸೋಂಕಿತರಿಗೆ ತ್ವರಿತವಾಗಿ ಚಿಕಿತ್ಸೆ ನೀಡಲು ಮೇಲ್ವಿಚಾರಣೆ, ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಜಿಲ್ಲಾ ಕೋವಿಡ್ ಕಂಟ್ರೋಲ್ ರೂಮ್‍ನ್ನು ರಚಿಸಲಾಗಿದ್ದು, ಇದು ರಾಜ್ಯದಲ್ಲೇ ವ್ಯವಸ್ಥಿತವಾದ ಮತ್ತು ಮಾದರಿಯಾದ ಕಂಟ್ರೋಲ್ ರೂಂ ಆಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಕೋವಿಡ್-19 ಕಂಟ್ರೋಲ್ ರೂಂಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಈ ಹಿಂದೆ ಕೋವಿಡ್ ಫಲಿತಾಂಶಗಳನ್ನು ದೇಶಾದ್ಯಂತ ಐಸಿಎಂಆರ್ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಲಾಗುತ್ತಿತ್ತು. ಪರಿಹಾರ ಆಪ್ ಮೂಲಕ ಜಿಲ್ಲೆಗಳು ಐಸಿಎಂಆರ್‍ನಿಂದ ಮಾಹಿತಿ ಪಡೆದು ತಾಲ್ಲೂಕುವಾರು ಲೈನ್‍ ಲಿಸ್ಟ್ ಮಾಡಲಾಗುತ್ತಿತ್ತು. ಲೈನ್‍ ಲಿಸ್ಟ್ ಆಪ್‍ನಲ್ಲಿ ಪಾಸಿಟಿವ್ ವರದಿಗಳು ಮತ್ತು ಆಪ್ತಮಿತ್ರ  ಆ್ಯಪ್‍ ನಲ್ಲಿ ಸೋಂಕಿತರ ಮಾಹಿತಿ ಲಭಿಸುತ್ತಿತ್ತು. ಇದೀಗ ಈ ಆಪ್‍ಗಳನ್ನು ವಿಲೀನಗೊಳಿಸಿ ಒಂದು ಲೈನ್‍ ಲಿಸ್ಟ್ ಆ್ಯಪ್‍ನ್ನು ಅಭಿವೃದ್ದಿಪಡಿಸಲಾಗಿದ್ದು ಈ ಕಂಟ್ರೋಲ್ ರೂಂನಿಂದ ಕಾರ್ಯ ನಿರ್ವಹಿಸಲಾಗುವುದು. ನೇರವಾಗಿ ರಾಜ್ಯ ವಾರ್ ರೂಂಗೆ ಸಂಪರ್ಕ ಹೊಂದಿ ಕೆಲಸ ನಿರ್ವಹಿಸಲಿರುವ ಕಂಟ್ರೋಲ್ ರೂಂನಲ್ಲಿ 8 ವಿಭಾಗಗಳಿದ್ದು(ಬಕೆಟ್ಸ್) ಕೋವಿಡ್ ಸೋಂಕಿತರ ಮೇಲ್ವಿಚಾರಣೆ ಮತ್ತು ನಿರ್ವಹಣೆ ಸೇರಿದಂತೆ ತ್ವರಿತ ಮತ್ತು ಶೀಘ್ರ ಚಿಕಿತ್ಸೆಗೆ ಸ್ಪಂದಿಸಲಿವೆ ಎಂದರು.

ರಾಜ್ಯ ವಾರ್‍ ರೂಮ್ ವಿಂಗಡಿಸಿದ ಪ್ರಕರಣಗಳನ್ನು ಜಿಲ್ಲಾ ಕಂಟ್ರೋಲ್ ರೂಂನಿಂದ ಪ್ರತಿದಿನ ವೀಕ್ಷಿಸಲಾಗುವುದು. ಜಿಲ್ಲೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಹ ಪಡೆಯಲಾಗುವುದು. ನಿಯೋಜಿತ ವೈದ್ಯರು ಮತ್ತು ಸಿಬ್ಬಂದಿಗಳು ಪ್ರತಿ ದಿನ ರೋಗಿಗಳಿಗೆ ಕರೆ ಮಾಡಿ ರೋಗಿಯ ಲಕ್ಷಣಗಳು, ಇತರೆ ವಿವರಗಳ ಮಾಹಿತಿ ಪಡೆದು ಕಂಟ್ರೋಲ್ ರೂಂನ ಎಂಟು ವಿಭಾಗಗಳಲ್ಲಿ ಸಿಗುವ ಸೌಲಭ್ಯ ಮತ್ತು ರೋಗ ನಿಯಂತ್ರಣದ ಕುರಿತು ಮಾಹಿತಿ ನೀಡುವರು.

ಎಂಟು ವಿಭಾಗಳಲ್ಲಿ ಕಾರ್ಯ ನಿರ್ವಹಣೆ

  • ಸರ್ಕಾರಿ ಆಸ್ಪತ್ರೆ ಸೇವೆ: ರೋಗ ಲಕ್ಷಣಗಳಿಂದ ಬಳಲುತ್ತಿದ್ದು ತಾವು ಸಂಪೂರ್ಣವಾಗಿ ಸರ್ಕಾರಿ ಆಸ್ಪತ್ರೆ ಸೇವೆ ಬಯಸುತ್ತೇವೆಂಬ ರೋಗಿಗೆ ಸೂಕ್ತ ಮಾಹಿತಿಯೊಂದಿಗೆ ಸರ್ಕಾರಿ ಆಸ್ಪತ್ರೆಯ ಸೇವೆ ನೀಡಲಾಗುವುದು.
  • ಕೋವಿಡ್ ಕೇರ್ ಸೆಂಟರ್ : ಲಕ್ಷಣಗಳು ಅತಿ ಕಡಿಮೆ ಇರುವ ಮತ್ತು ಲಕ್ಷಣಗಳು ಇಲ್ಲದೇ ಇರುವ ರೋಗಿಗಳಿಗೆ ತಮ್ಮ ಸಮೀಪವಿರುವ ಕೋವಿಡ್ ಕೇರ್ ಸೆಂಟರ್ ಬಗ್ಗೆ ಮಾಹಿತಿ ನೀಡಿ, ಅನುಕೂಲ ಮಾಡುವುದು.
  • ಹೋಂ ಐಸೊಲೇಷನ್ : ರೋಗ ಲಕ್ಷಣ ಕಡಿಮೆ ಇರುವ ಮತ್ತು ಲಕ್ಷಣ ಇಲ್ಲದೇ ಇದ್ದು, ಮನೆಯಲ್ಲಿ ಬಾತ್‍ರೂಂ ಹೊಂದಿದ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇರುವವರಿಗೆ ಹೋಂ ಐಸೋಲೇಷನ್ ನಿಯಮಗಳನ್ನು ಪಾಲಿಸಿ ಚಿಕಿತ್ಸೆ ಪಡೆಯುವಲ್ಲಿ ಅನುಕೂಲ ಮಾಡುವುದು.
  • ಖಾಸಗಿ ಆಸ್ಪತ್ರೆ+ಸರ್ಕಾರಿ ಆಂಬುಲೆನ್ಸ್: ರೋಗಿಗಳು ತಾವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೇವೆ ಆದರೆ ತಮಗೆ ಸರ್ಕಾರಿ ಆಂಬುಲೆನ್ಸ್‍ನ ಸೇವೆ ಬೇಕೆಂದು ಕೇಳಿದವರಿಗೆ ವ್ಯವಸ್ಥೆ ಮಾಡಿ ಮಾರ್ಗದರ್ಶನ ನೀಡುವುದು.
  • ಖಾಸಗಿ ಆಸ್ಪತ್ರೆ : ರೋಗಿಗಳು ತಮಗೆ ರೋಗ ಲಕ್ಷಣಗಳಿದ್ದು ತಾವು ಸಂಪೂರ್ಣವಾಗಿ ಖಾಸಗಿ ಆಸ್ಪತ್ರೆಯಲ್ಲೇ ಸೇವೆ ಪಡೆಯುತ್ತೇವೆ ಎಂಬುವವರಿಗೆ ಮಾರ್ಗದರ್ಶನ ಮತ್ತು ಅವರ ಮಾಹಿತಿ ನಿರ್ವಹಣೆ
  • ಈಗಾಗಲೇ ಆಸ್ಪತ್ರೆಯಲ್ಲಿರುವವರು : ಈಗಾಗಲೇ ಆಸ್ಪತ್ರೆಯಲ್ಲಿದ್ದು ಕೋವಿಡ್ ಪಾಸಿಟಿವ್ ಇರುವವರ ಮಾಹಿತಿ ಪಡೆಯುವುದು, ಮಾರ್ಗದರ್ಶನ ಮತ್ತು ಅಪ್‍ಡೇಟ್ ಮಾಡುವುದು.
  • ಅನ್‍ರೆಸ್ಪಾನ್ಸಿವ್ : ಕೋವಿಡ್ ಸೋಂಕಿತರಾಗಿದ್ದು ಎಷ್ಟು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸದೇ ಇರುವುದು, ಪ್ರತಿಕ್ರಿಯಿಸದೇ ಇರುವವರ ಮಾಹಿತಿ ಪಡೆದು ಪೊಲೀಸ್ ಕಂಟ್ರೋಲ್ ರೂಂ ಸಹಾಯ ಪಡೆದು ಕ್ರಮ ವಹಿಸುವುದು.
  • ಐಸಿಎಂಆರ್ ಲಿಸ್ಟ್ : ಐಸಿಎಂಆರ್‍ನಲ್ಲಿರುವ ಸಕ್ರಿಯ ಪಟ್ಟಿಯಲ್ಲಿನ ಮಾಹಿತಿ ಪಡೆದು, ಜಿಲ್ಲೆಗೆ ಸಂಬಂಧಿಸಿದಂತೆ ಅಗತ್ಯವಿರುವ ಹೆಚ್ಚಿನ ಮಾಹಿತಿ ಪಡೆಯುವುದು.

ಇದರೊಂದಿಗೆ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್‍ಮೆಂಟ್ ಸಿಸ್ಟಂ ವಿಭಾಗ ಇದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಬೆಡ್‍ಗಳ ಲಭ್ಯತೆ ಮಾಹಿತಿ ಪಡೆಯಬಹುದು. ಶಿಫ್ಟಿಂಗ್ ಟೀಂ ವಿಭಾಗದಿಂದ ತಾಲ್ಲೂಕುಗಳಿಂದ ಜಿಲ್ಲೆಗೆ ಹೀಗೆ ಉನ್ನತ ಆಸ್ಪತ್ರೆ, ಇತರೆಗಳಿಗೆ ಶಿಫ್ಟ್ ಮಾಡಲು ಸಹಕರಿಸುವುದು ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ವಿಶೇಷ ಭೂಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್ ಇವರನ್ನು ಜಿಲ್ಲಾ ಕೋವಿಡ್ ಕಂಟ್ರೋಲ್ ರೂಂ ನೋಡಲ್ ಅಧಿಕಾರಿಯಾಗಿ ಹಾಗೂ ಕೋವಿಡ್ ಕಂಟ್ರೋಲ್ ರೂಂ ಮೇಲ್ವಿಚಾರಣೆಗಾಗಿ ವೈದ್ಯಾಧಿಕಾರಿಗಳಾದ ಡಾ. ರುದ್ರೇಶ್.ಎಸ್, ಡಾ.ಹೇಮಂತ್‍ಕುಮಾರ್.ಕೆ, ಡಾ.ನೇತಾಜಿ ಇವರನ್ನು ನಿಯೋಜಿಸಲಾಗಿದೆ. ಹಾಗೂ ಕಂಟೋಲ್ ರೂಂ ನಿರ್ವಹಣೆಗೆ ಇತರೆ ತಾಂತ್ರಿಕ ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗಿದೆ ಎಂದರು.

ಈ ವೇಳೆ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಡಿಹೆಚ್‍ಓ ಡಾ.ನಾಗರಾಜ್, ಡಾ.ನಟರಾಜ್, ಎಲ್ಲಾ ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *