ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪೆಟ್ರೋಲ್ , ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಕೃಷಿ ಕಾಯ್ದೆ ಖಂಡಿಸಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಜಯದೇವ ವೃತ್ತ, ಮಹಾತ್ಮಗಾಂಧಿ ವೃತ್ತ, ಪಿ.ಬಿ.ರಸ್ತೆ ಮೂಲಕ ಮಹಾನಗರ ಪಾಲಿಕೆ ಮುಂಭಾಗ ಆಗಮಿಸಿತು. ಅಡುಗೆ ಸಿಲಿಂಡರ್ ಮತ್ತು ದ್ವಿಚಕ್ರವಾಹನವನ್ನು ಹೊತ್ತು ಮೆರವಣಿಗೆ ಮಾಡಿದರು.
ಬೃಹತ್ ಮೆರವಣಿಗೆ ನಂತರ ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಮಹಾನಗರ ಪಾಲಿಕೆ ಮುಂಭಾಗ ಬಹಿರಂಗ ಸಭೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ, ಕೆಪಿಸಿಸಿ ವೀಕ್ಷಕರಾದ ಅಮೃತೇಶ್ ಮತ್ತಿತರರು ಮಾತನಾಡಿದರು.
ಕೇಂದ್ರ ಸರ್ಕಾರ ಮೂರು ರೈತ ವಿರೋದಿ ಕಾಯಿದೆ ಜಾರಿಗೆ ತಂದಿದೆ. ಕಳೆದ 75 ದಿನಗಳಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಚಳವಳಿ ನಿರತರಾಗಿದ್ದಾರೆ. ಉತ್ತರ ಭಾರತದಲ್ಲಿ ಮೈ ಕೊರೆಯುವ ಚಳಿಯಿಂದ ಸುಮಾರು 155ಕ್ಕೂಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೆ, ಅನ್ನದಾತರ ನೋವು, ಅಳಲು, ಕಷ್ಟ ಸರ್ಕಾರಕ್ಕೆ ಕಾಣಿಸುತ್ತಿಲ್ಲ.

ಇನ್ನೊಂದೆಡೆ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಕೇಂದ್ರ ಸರಕಾರವು 19 ಲಕ್ಷ ಕೋಟಿ ರೂಪಾಯಿಗಳಷ್ಟು ಅಧಿಕ ಸುಂಕವನ್ನು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ತೆರಿಗೆಗಳಿಂದ ಸಂಗ್ರಹಿಸಿದೆ. ಇದರಿಂದಾಗಿ ರೈತರ ಮತ್ತು ಜನಸಾಮಾನ್ಯರ ಮೇಲೆ ತೀವ್ರವಾದ ಪರಿಣಾಮಗಳಾಗಿವೆ. ತೈಲ ಬೆಲೆ ಏರಿಕೆ ಹಾಗೂ ಅದರಿಂದಾಗಿ ಏರುತ್ತಿರುವ ಅವಶ್ಯಕ ಸಾಮಾಗ್ರಿಗಳ ಬೆಲೆ ಏರಿಕೆಗೆ ಕಾರಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಅಬ್ದುಲ್ ಲತೀಫ್, ಜಿ.ಎಸ್.ಮಂಜುನಾಥ್, ಜಾಕೀರ್, ಸೈಯದ್ ಚಾರ್ಲಿ, ಪಾಮೇನಹಳ್ಳಿ ನಾಗರಾಜ್, ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್,ಎಂ.ಎಸ್.ಕೊಟ್ರಯ್ಯ, ಶಾಮನೂರು ಟಿ.ಬಸವರಾಜ್, ಆರೀಫ್ ಖಾನ್, ಎಸ್.ಮಲ್ಲಿಕಾರ್ಜುನ್, ಕೆ.ಜಿ.ಶಿವಕುಮಾರ್, ನೀಲಗಿರಿಯಪ್ಪ, ಸೋಮ್ಲಾಪುರ ಹನುಮಂತಪ್ಪ, ಅಯೂಬ್ ಪೈಲ್ವಾನ್, ಕಿಸಾನ್ ಘಟಕದ ಬಾತಿ ಶಿವಕುಮಾರ್, ಅಜ್ಜಪ್ಪ ಪವಾರ್, ಎಸ್.ಎಂ.ರುದ್ರೇಶ್, ಅಣಜಿ ಅಂಜಿನಪ್ಪ,ಹೆಚ್.ಜಯಣ್ಣ, ಆನೆಕೊಂಡ ಲಿಂಗರಾಜ್, ಕಲ್ಲೇಶಪ್ಪ,, ಯುವ ಕಾಂಗ್ರೆಸ್ನ ಎಲ್.ಹೆಚ್.ಸಾಗರ್, ಮುಜಾಹಿದ್, ಲಿಯಾಕತ್ ಅಲಿ, ಪ್ರವೀಣ್ ಫಾರ್ಮ,ಶ್ರೀಕಾಂತ್ ಬಗೇರ ಮತ್ತಿತರರು ಉಪಸ್ಥಿತರಿದ್ದರು.



