ದಾವಣಗೆರೆ: ರಾಜ್ಯದಲ್ಲಿ ದುಬಾರಿಯಾಗಿರುವ ವೈದ್ಯಕೀಯ ಶಿಕ್ಷಣಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ರಾಣೇಬೆನ್ನೂರಿನ ಚಳಗೇರಿಯಲ್ಲಿ ಉಕ್ರೇನ್ ನಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಜಿಎಂಐಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಸರ್ಕಾರದ ಶುಲ್ಕ ಕಡಿಮೆಯಿದ್ದರೂ, ಖಾಸಗಿ ವಲಯದಲ್ಲಿ ಹೆಚ್ಚಿದೆ. ಶೇ 90-95 ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಟ್ನಲ್ಲಿ ಉತ್ತೀರ್ಣರಾಗಲು ಆಗುತ್ತಿಲ್ಲ. ಮ್ಯಾನೇಜ್ಮೆಂಟ್ ಹಾಗೂ ಎನ್.ಆರ್.ಐ ಸೀಟುಗಳನ್ನು ಪಡೆಯಲು ದುಬಾರಿಯಾಗಿರುವುದರಿಂದ ಬೇರೆ ಮಾರ್ಗ ಹುಡುಕುತ್ತಿದ್ದಾರೆ. ರಾಜ್ಯದಲ್ಲಿ ವೈದ್ಯಕೀಯ ಶುಲ್ಕ ಕಡಿಮೆ ಮಾಡಲು ಎ, ಬಿ, ಸಿ ವರ್ಗಗಳನ್ನು ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ವೈದ್ಯಕೀಯ ಕೋರ್ಸು ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಿರ್ಧರಿಸುತ್ತದೆ. ಈ ಬಗ್ಗೆ ಪರಿಶೀಲನೆ ನಡೆದಿದೆ. ರಾಜ್ಯದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಶುಲ್ಕ ಹೆಚ್ಚಿದೆ. ಈ ಕುರಿತು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಉಕ್ರೇನ್ನಿಂದ ವಾಪಸ್ಸಾಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಅಪೂರ್ಣವಾಗಿದ್ದು, ಪರ್ಯಾಯ ಕ್ರಮಗಳ ಬಗ್ಗೆ ಕೇಂದ್ರ ಗಂಭೀರ ಚಿಂತನೆ ಮಾಡುತ್ತಿದೆ. ಉಕ್ರೇನ್ನಲ್ಲಿ ಕೋರ್ಸ್ಗಳು ಹಾಗೂ ರಾಜ್ಯದಲ್ಲಿನ ಮೆಡಿಕಲ್ ಕೋರ್ಸ್ಗಳೂ ಭಿನ್ನವಾಗಿವೆ. ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನಿಂದ ಯುದ್ಧ ಭೂಮಿಯಿಂದ ನವೀನ್ ಮೃತದೇಹ ತರಲು ಭಗೀರಥ ಪ್ರಯತ್ನವೇ ಕಾರಣ. ಯುದ್ಧ ಈಗಲೂ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ನವೀನ್ ಒಬ್ಬನೇ ತರುವುದು ಕಷ್ಟಕರವಾಗಿತ್ತು. ನವೀನ್ ಸಾವನ್ನಪ್ಪಿದಾಗ ಪ್ರಧಾನಿ ನರೇಂದ್ರ ಮೋದಿ ನವೀನ್ ಪೋಷಕರಿಗೂ ಕರೆ ಮಾಡಿ ಮಾತನಾಡಿದ್ದಾರೆ. ನಾನೂ ಸಹ ಮಾತನಾಡಿದ್ದೇನೆ. ಭಾರತೀಯ ರಾಯಭಾರಿಗಳು ಅಲ್ಲಿನ ಸರ್ಕಾರದ ಜೊತೆಗೆ ಮಾತನಾಡಿ ಮೃತದೇಹ ತರಲು ಸಹಕರಿಸಿದ್ದಾರೆ. ವಿದೇಶಾಂಗ ಸಚಿವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಮೃತದೇಹ ರಕ್ಷಣೆ ಮಾಡಿಟ್ಟಿದ್ದರು ಎಂದರು.



