ಸಿರಿಗೆರೆ: ಸಿರಿಗೆರೆಯ ತರಳಬಾಳು ಬೃಹನ್ಮಠದ ಈ ಬಾರಿಯ ತರಳಬಾಳು ಹುಣ್ಣಿಮೆ ಮಹೋತ್ಸ ರಾಜ್ಯದಲ್ಲಿ ತೀವ್ರ ಬರ ಹಿನ್ನಲೆ ಸರಳವಾಗಿ ಸಿರಿಗೆರೆಯಲ್ಲಿ ಮೂರು ದಿನ ಸಾಂಪ್ರದಾಯಿಕವಾಗಿ ಆಚರಣೆ ನಡೆಯಲಿದೆ. ಫೆ.22ರಿಂದ 24ರವರೆಗೆ ಸಿರಿಗೆರೆಯ ಬಿ.ಲಿಂಗಯ್ಯ ವಸತಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಹುಣ್ಣಿಮೆ ಮಹೋತ್ಸವದ ಅಂಗವಾಗಿ ಈ ಬಾರಿ ಗ್ರಾಮೀಣ ಯುವ ಕ್ರೀಡಾ ಮೇಳ, ಯುವ ಗೋಷ್ಠಿ, ಮಹಿಳಾ ಗೋಷ್ಠಿ, ತರಳಬಾಳು ವಿಜ್ಞಾನ ಮೇಳ ಮತ್ತು ಹಲವು ಸಾಹಿತ್ಯಕ ಕೃತಿಗಳ ಲೋಕಾರ್ಪಣೆ ನಡೆಯಲಿವೆ. ತರಳಬಾಳು ಪೀಠ ಸಂಸ್ಥಾಪಕರಾದ ವಿಶ್ವಬಂಧು ಮರುಳಸಿದ್ಧರ ಕುರಿತ ನಾಟಕ ಪ್ರದರ್ಶನ ನಡೆಯಲಿದೆ. 24ರಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸದ್ಧರ್ಮ ಸಿಂಹಾಸನಾರೋಣ ಮಾಡಿ ಭಕ್ತರಿಗೆ ಆಶೀರ್ವಚನ ನೀಡುವರು.
2023ರ ಫೆಬ್ರವರಿಯಲ್ಲಿ ವಿಜಯನಗರ ಜಿಲ್ಲೆ ಕೊಟ್ಟೂರಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಿತ್ತು. 2024ರಲ್ಲಿ ಮಹೋತ್ಸವ ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ನಡೆಯಲಿದೆ ಎಂದು ಘೋಷಿಸಲಾಗಿತ್ತು. ಆದರೆ, ಬರ ಹಿನ್ನಲೆ ಈ ವರ್ಷ ಮುಂದೂಡಲಾಗಿದೆ.



