ದಾವಣಗೆರೆ: ಮಾರ್ಚ್ 3ರಂದು ನಗರದ ಎ.ವಿ.ಕೆ. ಕಾಲೇಜು ರಸ್ತೆಯಲ್ಲಿ ಚಿತ್ರಕಲಾ ಪರಿಷತ್ನಿಂದ ಮೂರನೇ ವರ್ಷದ ದಾವಣಗೆರೆ ಚಿತ್ರಸಂತೆ ಆಯೋಜಿಸಲಾಗಿದೆ ಎಂದು ಚಿತ್ರಕಲಾಪರಿಷತ್ನ ಕಾರ್ಯದರ್ಶಿ ಡಿ. ಶೇಷಾಚಲ ಮಾಹಿತಿ ನೀಡಿದ್ದಾರೆ.
ಈ ಬಾರಿ ಚಿತ್ರಸಂತೆಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ರಾಜಸ್ಥಾನ, ಆಂಧ್ರಪ್ರದೇಶದಿಂದ ಕಲಾವಿದರು ಭಾಗವಹಿಸಲಿದ್ದಾರೆ. ಕಳೆದ ವರ್ಷ ಚಿತ್ರಸಂತೆಗೆ ಉತ್ತಮ ಸ್ಪಂದನೆ ಸಿಕ್ಕಿತ್ತು.
ಮಾ.3ರಂದು ಬೆಳಿಗ್ಗೆ 8ರಿಂದ ರಾತ್ರಿ 7ರವರೆಗೆ ಕಲಾವಿದರ ಚಿತ್ರಕಲೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಿ.ಜಿ. ಶಾಂತನಗೌಡ, ಬಿ. ದೇವೇಂದ್ರಪ್ಪ, ಕೆ.ಎಸ್. ಬಸವಂತಪ್ಪ, ಮೇಯರ್ ವಿನಾಯಕ ಪೈಲ್ವಾನ್ ಭಾಗವಹಿಸುವರು. ಪರಿಷತ್ ಅಧ್ಯಕ್ಷ ಡಿ.ಸಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಮಾರ್ಚ್ 2ರಂದು ಚಿತ್ರಸಂತೆಯ ಹಂದರಗಂಬ ಪೂಜೆ ನಡೆಯಲಿದೆ. ಚಿತ್ರಸಂತೆಗೆ ಬರುವ ಕಲಾವಿದರಿಗೆ ಊಟ, ವಸತಿ ವ್ಯವಸ್ಥೆ ಇರಲಿದೆ. ಭಾಗವಹಿಸಿದ ಎಲ್ಲಾ ಕಲಾವಿದರಿಗೂ ಪ್ರಮಾಣಪತ್ರ ನೀಡಲಾಗುವುದು. ಉತ್ತಮ ಚಿತ್ರ ಹಾಗೂ ಉತ್ತಮ ಮಳಿಗೆ ಸಿದ್ಧಪಡಿಸಿಕೊಂಡ 9 ಜನ ಕಲಾವಿದರಿಗೆ ಬಹುಮಾನ ನೀಡಲಾಗುವುದು ಎಂದರು.



