ಚನ್ನಗಿರಿ: ತಾಲ್ಲೂಕಿನ ದಾಗಿನಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಲೋದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕೆರೆ ತುಂಬಿದ್ದು ಇಂದು ಬಾಗಿನ ಅರ್ಪಿಸಲಾಯಿತು.
ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಸೇರಿದ 5 ಎಕೆರೆ ಹಾಗೂ ಎಂ.ಎಲ್. ಮಲ್ಲೇಶಪ್ಪ ಗೌಡ್ರು ಹಾಗೂ ಎಂ. ಬಿ. ಭೂಮೇಶ್ವರಪ್ಪ ಅವರು ನೀಡಿದ 4 ಎಕೆರೆ ದಾನದ ಭೂಮಿಯಿಂದ ಒಟ್ಟು 9 ಎಕೆರೆ ಪ್ರದೇಶದಲ್ಲಿ ನೂತನ ಕೆರೆ ನಿರ್ಮಿಸಲಾಗಿದೆ.
ಕೆರೆಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ರೈತರು ಕೃಷಿ ಜಮೀನು ಬಿಟ್ಟು ಕೊಡುವುದೇ ಕಷ್ಟ ಎನ್ನುವ ಕಾಲದಲ್ಲಿ, ಯಲೋದಹಳ್ಳಿ ಗ್ರಾಮದ ರೈತರು ತಾವೇ ಸ್ವತಃ ಭೂಮಿ ಬಿಟ್ಟುಕೊಟ್ಟು ಕೆರೆ ನಿರ್ಮಿಸಿರುವುದು ಹೆಮ್ಮೆಪಡುವ ವಿಚಾರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೆರೆ ನಿರ್ಮಾಣದಿಂದ ಅಂತರ್ಜಲ ಮಟ್ಟ ಹೆಚ್ಚುವುದರೊಂದಿಗೆ ರೈತರಿಗೆ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಿದರು.
ಗ್ರಾಮಕ್ಕೆ ಅಗತ್ಯವಾದ ಬೃಹತ್ ಬೀದಿ ದೀಪ ಹಾಗೂ ಗ್ರಾಮಕ್ಕೆ ಕೆಎಸ್ ಆರ್ ಟಿಸಿ ಬಸ್ ಸೌಕರ್ಯವನ್ನು ಶೀಘ್ರದಲ್ಲಿಯೇ ಕಲ್ಪಸಲಾಗುವುದು ಎಂದು ಸಂಸದ ಜಿಎಂ ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಾತನಾಡಿ, ಬೆನಕನಹಳ್ಳಿ ಏತ ನೀರಾವರಿಯಿಂದ ಯಲೋದಹಳ್ಳಿ ಕೆರೆಗೆ ನೀರು ತುಂಬಿಸಲು 3 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧವಾಗಿದೆ. ಶೀಘ್ರದಲ್ಲಿಯೇ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಪ್ರೊ. ಎನ್. ಲಿಂಗಣ್ಣ , ಶಾಸಕ ರೇಣುಕಾಚಾರ್ಯ, ಮಾಜಿ ಶಾಸಕರಾದ ಕೆ. ಶಿವಮೂರ್ತಿ, ಡಿ,ಜಿ ಶಾಂತನಗೌಡರು, ಎಂ. ಬಸವರಾಜ್ ನಾಯ್ಕ , ರೈತ ಮುಖಂಡ ತೇಜಸ್ವಿ ಪಟೇಲ್ , ಜಿ. ಪಂ. ಮಾಜಿ ಸದಸ್ಯ ಹೊದಿಗೆರೆ ರಮೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಪಲ್ಲವಿ ಕಿರಣ್ ಸೇರಿದಂತೆ ಗ್ರಾಮಸ್ಥರರು ಉಪಸ್ಥಿತರಿದ್ದರು.



