ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ ಗ್ರಾಮದ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಅಸ್ವಸ್ಥರನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮತ್ತು ಭದ್ರಾವತಿ ಆಸ್ಪತ್ರಗೆ ದಾಖಲಿಸಲಾಗಿದೆ.
ಕುಡಿಯುವ ನೀರಿಗೆ ಚರಂಡಿ ನೀರು ಸೇರಿದ್ದರಿಂದ ನೀರು ಕಲುಷಿತವಾಗಿದೆ. ಇದನ್ನು ಸೇವಿಸಿದ ಪರಿಣಾಮ ಮಹಿಳೆಯರು, ಮಕ್ಕಳು, ವಯೋವೃದ್ದರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ರಾತ್ರಿಯಿಂದಲೇ ಕೆಲವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಮೊದಲು ನಾಲ್ಕು ಜನರರಲ್ಲಿ ವಾಂತಿ-ಬೇಧಿ ಕಂಡಿತು. ಬಳಿಕ ಹಂತ, ಹಂತವಾಗಿ ಗ್ರಾಮದ 33 ಜನರು ಅಸ್ವಸ್ಥರಾಗಿದ್ದಾರೆ.
ಜೋಳದಾಳ ಗ್ರಾಮಕ್ಕೆ ಚನ್ನಗಿರಿ ಇಒ ಬಿ.ಕೆ.ಉತ್ತಮ್, ಕುಡಿಯುವ ನೀರು ವಿಭಾಗದ ಎಇಇ ಲೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೋಳದಾಳ ಗ್ರಾಮದಲ್ಲಿ ವೈದ್ಯರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾಯಿಸಿ ಆರಿಸಿದ ನೀರು ಕುಡಿಯುವಂತೆ ಗ್ರಾಮಸ್ಥರಿಗೆ ವೈದ್ಯರು ಸೂಚಿಸಿದ್ದಾರೆ.



