ದಾವಣಗೆರೆ: ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಮೇಲ್ಚಾವಣಿಯ ಪದರು ಬಿದ್ದ ಪರಿಣಾಮ ಮಗು ಸೇರಿ ಮೂರಿಗೆ ಗಾಯವಾದ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಎದುರಿನ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ ಪದರು ಬಿದ್ದಿದೆ. ಇದರಿಂದ ವಾರ್ಡ್ ನಲ್ಲಿದ್ದ ಪ್ರೇಮಕ್ಕ (46) ಕಾವೇರಿ(36) ಹಾಗೂ ಎರಡು ವರ್ಷದ ನೇತ್ರಾ ಎಂಬ ಮಗುವಿಗೆ ಗಾಯವಾಗಿದೆ. ಮಗುವಿನ ತಲೆಗೆ ಹಾಗೂ ಇಬ್ಬರು ಮಹಿಳೆಯರ ಕೈ ಮತ್ತು ಇನ್ನೊಬ್ಬರ ಬೆನ್ನಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳುಗಳು ವಿಜಯನಗರ ಜಿಲ್ಲೆಯ ಹಲವಾಗಲು ಹಾಗೂ ಹಳಲು ಗ್ರಾಮದ ನಿವಾಸಿಗಳಾಗಿದ್ದು, ಪ್ರೇಮಕ್ಕ ಹಾಗೂ ಕಾವೇರಿ ಸಹೋದರಿಯರು. ತಾಯಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಆರೋಗ್ಯ ವಿಚಾರಿಸಲು ಬಂದಿದ್ದ ವೇಳೆ ಈ ಅವಘಡ ನಡೆದಿದೆ.ಈ ಘಟನೆಗೆ ನಡೆದ ನಂತರ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತೊಡಿಸಿದ್ದು, ಗಾಯಾಳುಗಳಿಗೆ ಪರಿಹಾರ ನೀಡುವುದರ ಜೊತೆ ಕಟ್ಟಡ ದುರಸ್ತಿಗೆ ಆಗ್ರಹಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ಬಹುತೇಕ ಕಟ್ಟಡಗಳು ಬಿರುಕು ಬಿಟ್ಟಿದೆ. ಆಸ್ಪತ್ರೆಯಲ್ಲಿ ರೋಗಿಗಳು ಭಯಪಡುವ ವಾತಾವರಣವಿದೆ.



