ದಾವಣಗೆರೆ: ಭದ್ರಾ ಜಲಾಶಯದಿಂದ ಬಲದಂಡೆ ನಾಲೆಯ ಗೇಟ್ ಓಪನ್ ಮಾಡಿ ನಾಲ್ಕೈದು ದಿನ ಕಳೆದರೂ ದಾವಣಗೆರೆ ನಾಲೆಗಳಿಗೆ ನೀರು ಬಂದಿಲ್ಲ. ನೀರು ಬಾರದಿರುವುದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಒಕ್ಕೂಟದ ನೇತೃತ್ವದಲ್ಲಿ ತಾಲೂಕಿನ ಕುಕ್ಕವಾಡ ಬಳಿ ಭದ್ರಾ ನಾಲೆಗಿಳಿದು ಪ್ರತಿಭಟಿಸಿದರು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತ ಮುಖಂಡ ತೇಜಸ್ವಿ ವಿ.ಪಟೇಲ್ ನೇತೃತ್ವದಲ್ಲಿ ಭದ್ರಾ ನಾಲೆಗಿಳಿದು ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ಅವರು, ಭದ್ರಾ ಅಣೆಕಟ್ಟೆಯಿಂದ ಕಳೆದ ಬಾರಿ ಬಿಟ್ಟಿದ್ದ ನೀರೇ ತಲುಪಿರಲಿಲ್ಲ. ಈಗ ನಾಲ್ಕೈದು ದಿನಗಳ ಹಿಂದೆ ನಾಲೆಗಳಿಗೆ ನೀರು ಬಿಟ್ಟಿದ್ದರೂ ಇನ್ನೂ ಒಂದೇ ಒಂದು ಹನಿ ನೀರು ಸಹ ನಮ್ಮ ಭಾಗಕ್ಕೆ ತಲುಪಿಲ್ಲ. ಹೀಗಾದರೆ ಅಚ್ಚುಕಟ್ಟು ಪ್ರದೇಶದ ರೈತರು ಏನು ಮಾಡಬೇಕು? ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪುವುದಾದರೂ ಹೇಗೆ ಎಂದು ಕಿಡಿಕಾರಿದರು.
ನೀರಾವರಿ ಇಲಾಖೆ, ಜಿಲ್ಲಾಡಳಿತಗಳು ರೈತರ ತಾಳ್ಮೆ ಪರೀಕ್ಷಿಸಬಾರದು. ಮಕ್ಕಳಿಗಿಂತಲೂ ಹೆಚ್ಚಾಗಿ ತೋಟಗಳನ್ನು ರೈತರು ನೋಡಿಕೊಂಡು ಬಂದಿದ್ದಾರೆ. ಸಾಲ ಮಾಡಿ, ಕೊಳವೆ ಬಾವಿ ಕೊರೆಸಿದರೂ ಒಂದು ಹನಿ ನೀರು ಸಿಗುತ್ತಿಲ್ಲ. ಈ ಹಿಂದೆ ನೀರು ನೀಡುತ್ತಿದ್ದ ಕೊಳವೆ ಬಾವಿಗಳು ಅಂತರ್ಜಲ ಖಾಲಿಯಾಗಿ ಬರಿದಾಗುತ್ತಿವೆ. ಭದ್ರಾ ನಾಲೆಗೆ ನೀರು ಹರಿದರಷ್ಟೇ ರೈತರ ಸಮಸ್ಯೆಗೆ ಪರಿಹಾರ. ದಿನದಿಂದ ದಿನಕ್ಕೆ ಬೆಳೆಗಳು ಒಣಗುತ್ತಿರುವುದು ರೈತರನ್ನು ಆತಂಕಕ್ಕೆ ನೂಕುತ್ತಿದೆ.
ರೈತರ ಶಾಂತಿಯುತ ಹೋರಾಟ, ಧರಣಿಯನ್ನು ದೌರ್ಬಲ್ಯ ಅಲ್ಲ. ಸಾಂವಿಧಾನಿಕ ಚೌಕಟ್ಟಿನಲ್ಲಿ ರೈತರ ಬೇಡಿಕೆಗೆ ಸ್ಪಂದನೆ ಸಿಗದಿದ್ದರೆ, ಅದೇ ಅನ್ನದಾತ ರೈತರ ಹೋರಾಟವು ತೀವ್ರ ಸ್ವರೂಪ ಪಡೆಯಲಿದೆ. ಭದ್ರಾ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಫೆ.22ರಂದು ಟ್ರ್ಯಾಕ್ಟರ್ ಸಮೇತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆಂದು ಎಚ್ಚರಿಸಿದರು.
ಸಂಘದ ಉಪಾಧ್ಯಕ್ಷ ಕೆ.ಎನ್.ಮಂಜುನಾಥ, ಷಣ್ಮುಖಸ್ವಾಮಿ, ರೈತ ಒಕ್ಕೂಟದ ಬಿ.ಎಂ.ಸತೀಶ ಕೊಳೇನಹಳ್ಳಿ, ವಕೀಲ ಮತ್ತಿ ಹನುಮಂತಪ್ಪ, ದಿಳ್ಯಪ್ಪ ಮುದಹದಡಿ, ಡಿ.ಮಲ್ಲೇಶಪ್ಪ, ಮಹೇಶ್ವರಪ್ಪ, ಗೋಪಾಲ, ಕಲ್ಲೇಶಪ್ಪ, ಅರವಿಂದ, ದಿನೇಶ, ನಿರಂಜನಮೂರ್ತಿ, ಸಿರಿಗೆರೆ ಪ್ರಭು, ಕಿರಣ, ಹರೀಶ, ಜಿ.ಸಿ.ಮಂಜುನಾಥ, ಗಂಗಾಧರ ಇತರರು ಇದ್ದರು.



