ಬೆಂಗಳೂರು: ದಾವಣಗೆರೆ ಜಿಲ್ಲೆ ರೈತರ ಜೀವನಾಡಿ ಭದ್ರಾ ಜಲಾಶಯವಾಗಿದ್ದು, ಈ ಬಾರಿಯ ತೀವ್ರ ಮಳೆ ಕೊರತೆ ಹಿನ್ನೆಲೆ ಪೂರ್ಣ ಭರ್ತಿಯಾಗಿಲ್ಲ. ಇರುವ ನೀರನ್ನು ನಿರಂತರ 100 ದಿನ ಹರಿಸುವ ಭರವಸೆಯನ್ನು ನೀರಾವರಿ ಇಲಾಖೆ ನೀಡಿದ್ದರಿಂದ ರೈತರು ಭತ್ತ ನಾಟಿ ಮಾಡಿದ್ದರು. ಇದೀಗ ಇಲಾಖೆ ಆಫ್ ಅಂಡ್ ಆನ್ ಪದ್ಧತಿ ಮೊರೆ ಹೋಗಿದೆ. ಈ ಪದ್ಧತಿ ರದ್ದು ಮಾಡಿ ನಿರಂತರವಾಗಿ ಬಲದಂಡೆ ನಾಲೆಗೆ ನಿರಂತರ ನೀರು ಹರಿಸಬೇಕೆಂದು ದಾವಣಗೆರೆ ಸಂಸದ, ಹರಿಹರ ಶಾಸಕರು ಹಾಗೂ ಅಚ್ಚುಕಟ್ಟು ರೈತರ ನೇತೃತ್ವದ ನಿಯೋಗ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಬೇಡಿಕೆಗೆ ಈಡೇರಿಸಿವ ಭರವಸೆಯನ್ನು ಡಿಸಿಎಂ ನೀಡಿದ್ದಾರೆ.
ದಾವಣಗೆರೆ ಲೋಕಸಭೆ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ನೇತೃತ್ವದ ನಿಯೋಗವು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ ವೇಳೆ, ಸಕಾರಾತ್ಮಕ ವಾಗಿ ಸ್ಪಂದಿದ್ದಾರೆ.ನಿರಂತರ ನೀರು ಹರಿಸಲು ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ ) ಅಧ್ಯಕ್ಷ ಮಧು ಬಂಗಾರಪ್ಪ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಭದ್ರಾ ಜಲಾಶಯದಿಂದ ನೀರನ್ನು ಆಗಸ್ಟ್ 10ರಿಂದ ನಿರಂತರವಾಗಿ 100 ದಿನ ಹರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಆದ್ದರಿಂದ ರೈತರು ಜಮೀನು ಉಳಿಮೆ ಮಾಡಿಕೊಂಡು ಭತ್ತದ ನಾಟಿ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಎಕರೆಯಲ್ಲಿ ಭತ್ತದ ಬೆಳೆ ಬೆಳೆಸಿದ್ದಾರೆ. ಈಗ ಬೆಳೆ ಹೂವಾಡುವ ಹಂತದಲ್ಲಿದ್ದು, ತೆನೆ ಕಟ್ಟುವ ಸಮಯ. ಆದರೆ ಭದ್ರಾ ನೀರಾವರಿ ಸಲಹಾ ಸಮಿತಿ ನಿರಂತರ 100 ದಿನದ ಬದಲು, ಆಫ್ ಅಂಡ್ ಆನ್ ಪದ್ಧತಿ ಅಂದರೆ 20 ದಿನ ನೀರು ಹರಿಸುವುದು ಮತ್ತು 10 ದಿನ ನೀರು ನಿಲ್ಲಿಸುವುದನ್ನು ಜಾರಿ ಮಾಡಿದೆ.ಇದರಿಂದ ನಿರಂತರ ನೀರು ಬೇಡುವ ಭತ್ತದ ಬೆಳೆಗೆ ಹಾನಿಯಾಗಲಿದೆ. ಪ್ರಸ್ತುತ ಭದ್ರಾ ನೀರು ಹರಿಸುವ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 15 ರಂದು ನೀರು ನಿಲುಗಡೆ ಮಾಡಲಾಗುವುದು.
ದಾವಣಗೆರೆ ಜಿಲ್ಲೆಯ ರೈತರು ಸಾಲ ಸೋಲ ಮಾಡಿ, ಸಾಕಷ್ಟು ಬಂಡವಾಳ ಹಾಕಿ ಭತ್ತ ನಾಟಿ ಮಾಡಿದ್ದಾರೆ. ನೀರು ನಿಲ್ಲಿಸುವುದರಿಂದ ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಬೆಳೆಯುವ ರೈತರಿಗೆ ಬಹಳ ಅನ್ಯಾಯವಾಗುತ್ತದೆ. ರೈತರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುವಂತಾಗುತ್ತದೆ. ಹೀಗಾಗಿ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿರುವ ಆಫ್ ಅಂಡ್ ಆನ್ ಪದ್ಧತಿ ರದ್ದುಗೊಳಿಸಿ ನಿರಂತರ 100 ದಿನ ನೀರು ಹರಿಸುವಂತೆ ಪತ್ರದ ಮೂಲಕ ಮನವಿ ಮಾಡಿದರು. ಇದಕ್ಕೆ ಡಿ. ಕೆ. ಶಿವಕುಮಾರ್ ಅವರು ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹರಿಹರ ಶಾಸಕ ಬಿ. ಪಿ. ಹರೀಶ್, ವಿಧಾನ ಪರಿಷತ್ ಸದಸ್ಯ ನವೀನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಎಂ. ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ
ಲೋಕಿಕೆರೆ ನಾಗರಾಜ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಧನಂಜಯ ಕಡ್ಲೆಬಾಳ್, ದೇವೇಂದ್ರಪ್ಪ, ಬಾತಿ ವಿರೇಶ್ ದೊಗ್ಗಳ್ಳಿ, ಬಿ. ಕೆ. ಶಿವಕುಮಾರ್ ಸೇರಿದಂತೆ ಮತ್ತಿತರರು ಇದ್ದರು.