ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶ ರೈತರಿತ ಸಭೆ ಆಗಸ್ಟ್ ಮೊದಲ ವಾರದಲ್ಲಿ ನಡೆಯಲಿದ್ದು, ಅಂದೇ ನೀರು ಬಿಡುಗಡೆ ದಿನ ನಿಗದಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ದೇವರ ಕೃಪೆಯಿಂದ ಸರಿಯಾದ ಸಮಯದಲ್ಲಿ ಮಳೆಯಾಗಿದೆ. ರೈತರ ಮುಖದಲ್ಲಿ ಮಂದಹಾಸ ಬೀರಿದ್ದು, ಆಗಸ್ಟ್ ಮೊದಲ ವಾರದಲ್ಲಿ ಕಾಡಾ ಸಮಿತಿ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಸಭೆಯಲ್ಲಿ ಭದ್ರಾ ಜಲಾಶಯನಿಂದ ನೀರು ಬಿಡುಗಡೆ ಮಾಡುವ ದಿನಾಂಕ ನಿಗದಿಪಡಿಸಲಾಗುವುದು. ಭದ್ರಾ ಜಲಾಶಯದಲ್ಲಿ ಪ್ರಸ್ತುತ 161.6 ಅಡಿ ನೀರು ಇದ್ದು, ಶೀಘ್ರದಲ್ಲಿಯೇ ನೀರಾವರಿ ಸಲಹಾ ಸಮಿತಿ ರಚಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಮುಂಗಾರು ಆರಂಭದಲ್ಲಿ ಮಳೆ ವಿಳಂಬವಾಯಿತಾದರೂ ನಂತರ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬಂದು ಜಲಾಶಯಕ್ಕೆ ಉತ್ತಮ ನೀರು ಹರಿದು ಬಂದಿದೆ. ವಾಡಿಕೆಯಂತೆ 163 ಅಡಿ ನೀರು ಜಲಾಶಯದಲ್ಲಿದ್ದರೆ ಮಳೆಗಾಲದಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಈಗಾಗಲೇ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆರಂಭಗೊಂಡಿದ್ದು, ನೀರಿನ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ಮೊದಲವಾರದಲ್ಲಿ ಕಾಡಾ ಸಮಿತಿ ಸಭೆ ಕರೆದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಬಾರಿ ಸಕಾಲಕ್ಕೆ ಸರಿಯಾಗಿ ಮಳೆಯಾಗದಿದ್ದರಿಂದ ಭದ್ರಾ ಡ್ಯಾಂ ಪೂರ್ಣ ಭರ್ತಿಯಾಗಿಲ್ಲ, ಕಳೆದ ವರ್ಷ ಈ ದಿನಕ್ಕೆ ಸಂಪೂರ್ಣ ಭರ್ತಿಯಾಗಿ ನಾಲೆಗೆ ನೀರು ಬಿಡಲಾಗಿತ್ತು. ಇದೀಗ ಕಳೆದ 15 ದಿನದಿಂದ ಉತ್ತಮ ಮಳೆಯಾಗಿದ್ದು, ಮುಂಗಾರು ಬೆಳೆಗೆ ಕಾಲುವೆ ಮೂಲಕ ನೀರು ಹರಿಸುವ ಭರವಸೆ ಮೂಡಿದೆ.