Connect with us

Dvgsuddi Kannada | online news portal | Kannada news online

ಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು; ಜು.27ರ ನೀರಿನ ಮಟ್ಟ178 ಅಡಿ; ಒಳಹರಿವು 49,801 ಕ್ಯೂಸೆಕ್; ಭರ್ತಿಗೆ 8 ಅಡಿ ಬಾಕಿ

ದಾವಣಗೆರೆ

ಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು; ಜು.27ರ ನೀರಿನ ಮಟ್ಟ178 ಅಡಿ; ಒಳಹರಿವು 49,801 ಕ್ಯೂಸೆಕ್; ಭರ್ತಿಗೆ 8 ಅಡಿ ಬಾಕಿ

ದಾವಣಗೆರೆ: ಭದ್ರಾ ಜಲಾಶಯ ವ್ಯಾಪ್ತಿಯ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದೆ. ಇದರಿಂದ ಒಳ ಹರಿವು ಭರ್ಜರಿ ಏರಿಕೆ ಕಂಡಿದೆ. ಇಂದು (ಜು.27) 49,801 ಕ್ಯೂಸೆಕ್ ಒಳ ಹರಿವಿದ್ದು, ನಿನ್ನೆ (ಜು.25)35318, ಜು.24ರಂದು 26,044 ಕ್ಯೂಸೆಕ್ ಇತ್ತು. ನಿನ್ನೆಗೆ ಹೋಲಿಸಿದ್ರೆ 10 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನಷ್ಟು ಒಳ‌ಹರಿವು ಏರಿಕೆಯಾಗಿದೆ. ಆದರೆ, ಕಳೆದ 12 ದಿನದಲ್ಲಿ 37 ಅಡಿ ನೀರು ಹೆಚ್ಚಳವಾಗಿದೆ. ಜು‌15 ರಂದು 141 ಅಡಿ ಇದ್ದ ನೀರು, ಇಂದು 178 ಅಡಿಗೆ ಏರಿಕೆಯಾಗಿದೆ.

ಡ್ಯಾಂ ಭರ್ತಿ ಸಮೀಪ ಬಂದಿದ್ದು, ಪೂರ್ಣ ಭರ್ತಿಗೆ ಇನ್ನೂ 8 ಅಡಿ ಮಾತ್ರ ಬಾಕಿ ಇದೆ. ಕಳೆದ ವರ್ಷ ಇದೇ ದಿನ 28296 ಕ್ಯೂಸೆಕ್ ಒಳ‌‌ಹರಿವು ಇತ್ತು. 158’0 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು.ಭದ್ರಾ ಡ್ಯಾಂ ಒಳಹರಿವು ಹೆಚ್ಚಳದಿಂದ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ಸಂತಸ ಮನೆ ಮಾಡಿದೆ. ಅದರಲ್ಲೂ ಭದ್ರಾವತಿ, ಹೊನ್ನಾಳಿ, ಹರಿಹರ, ದಾವಣಗೆರೆ ಭಾಗದ ಭತ್ತ ಬೆಳೆಗಾರರಲ್ಲಿ ಕೊನೆ ಗಳಿಗೆಯಲ್ಲಿ ಭತ್ತ ನಾಟಿ ಮಾಡುವ ಭರವಸೆ ಹುಟ್ಟಿದೆ. ಜಿಲ್ಲೆಯಲ್ಲಿ ತುಂಗಭದ್ರಾ ನದಿ ಸಹ ಉಕ್ಕಿ ಹರಿಯುತ್ತದೆ. ಜಿಲ್ಲೆಯ ಹೊನ್ನಾಳಿ, ಹರಿಹರ ಭಾಗದಲ್ಲಿ ತುಂಗಭದ್ರಾ ನದಿ ಹಾಯ್ದು ಹೋಗುತ್ತಿದ್ದು, ಈ ಭಾಗದಲ್ಲಿ ಭತ್ತ ನಾಟಿಗೆ ಭರದ ಸಿದ್ಧತೆ ನಡೆಯುತ್ತಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ದಾವಣಗೆರೆ ಜಿಲ್ಲೆಯಲ್ಲಿ 65,847 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈಗ ಭದ್ರಾ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗಿರುವುದರಿಂದ ನಾಲೆಗೆ ನೀರು ಹರಿಸುವ ಸಂಭವ ಇದೆ. ಈ ಹಿನ್ನೆಲೆ ಅಚ್ಚುಕಟ್ಟು ರೈತರು, ಭತ್ತದ ಸಸಿ ಮಡಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಬೋರ್ ವೆಲ್ ಇರುವವರು ಈಗಾಗಲೇ ಭತ್ತ ನಾಟಿಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಭದ್ರಾ ನಾಲೆಯ ನೀರು ಅವಲಂಭನೆ ಇರುವವರು ಬೋರ್ ನೀರಿಗೆ ಸಸಿ ಮಡಿ ಮಾಡುತ್ತಿದ್ದಾರೆ. ಭದ್ರಾ ಡ್ಯಾಂ ಭರ್ತಿಯಾಗುವ ಸಾಧ್ಯತೆ ಹೆಚ್ವಿದೆ. ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ನೀರು ಬಿಡುವ ಬಗ್ಗೆ ಎರಡು ದಿನದಲ್ಲಿ ಕಾಡಾ ಸಭೆ ನಡೆಯಲಿದೆ.

ಕಳೆದ ವರ್ಷದ ತೀವ್ರ ಬರಗಾಲದಿಂದ ಅತಿ ಕಡಿಮೆ ನೀರು ಸಂಗ್ರಹವಾಗಿತ್ತು. ಈ ಬಾರಿ ಭದ್ರಾ ಜಲಾಯಶ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮ ಆರಂಭ ಪಡೆದಿತ್ತದರೂ, ನಂತರದ 20 ದಿನ ಸಂಪೂರ್ಣ ತಗ್ಗಿತ್ತು. ಈಗ ಕಳೆದ 15 ದಿನದಿಂದ ಭಾರೀ ಮಳೆಯಾಗುತ್ತಿದೆ. ಇದೇ ರೀತಿ ಮಳೆಯಾದರೆ ಈ ತಿಂಗಳಲ್ಲಿಯೇ ಡ್ಯಾಂ ತುಂಬಲಿದೆ.

ತರಿಕೇರಿ ಮತ್ತು ಭದ್ರಾವತಿ ಗಡಿ ಭಾಗದಲ್ಲಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಇಂದಿನ (ಜು. 27) ನೀರಿನ ಮಟ್ಟ 178 ಅಡಿಯಷ್ಟಿದೆ. ಒಳ ಹರಿವು 49,801 ಕ್ಯೂಸೆಕ್‌ ನಷ್ಟಿದೆ.

  • ಭದ್ರಾ ಜಲಾಶಯ ನೀರಿನ ವಿವರ
  • ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
  • ಪ್ರಸ್ತುತ ನೀರಿನ ಮಟ್ಟ ; 61.823 ಟಿಎಂಸಿ
  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಮಟ್ಟ: 178 ಅಡಿ
  • ಒಳ ಹರಿವು : 49,801 ಕ್ಯೂಸೆಕ್ (ಜು.26ರಂದು
    35,318 ಕ್ಯೂಸೆಕ್)
  • ಹೊರ ಹರಿವು : 206 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 158’0 ಅಡಿ
  • ಇದೇ ದಿನ ಕಳೆದ ವರ್ಷದ ಒಳಹರಿವು: 28296 ಕ್ಯೂಸೆಕ್

ಯಾವುದೇ ಸಂದರ್ಭ ಕ್ರಸ್ಟ್‌ ಗೇಟ್‌ ಮೂಲಕ ನೀರು ಹೊರಕ್ಕೆ; ಭದ್ರಾ ಜಲಾಶಯ ಒಳ ಹರಿವು ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಯಾವುದೇ ಸಂದರ್ಭ ಕ್ರಸ್ಟ್‌ ಗೇಟ್‌ ಮೂಲಕ ನೀರು ಹೊರ ಬಿಡುವ ಸಾಧ್ಯತೆ ಇದೆ. ಹಾಗಾಗಿ ನೀರಾವರಿ ನಿಗಮದ ವತಿಯಿಂದ ಮೊದಲ ಅಲರ್ಟ್‌ ನೀಡಿದೆ.

ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದೆ. ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಒಳ ಹರಿವಿನ ಪ್ರಮಾಣ 50 ಸಾವಿರ ಕ್ಯೂಸೆಕ್‌ ಇದೆ. ಇದೇ ರೀತಿ ಮುಂದುವರೆದರೆ ಶೀಘ್ರದಲ್ಲಿ ಭದ್ರಾ ಜಲಾಶಯದ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಲಿದೆ. ಯಾವುದೆ ಸಂದರ್ಭ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತದೆ ಎಂದು ತಿಳಿಸಲಾಗಿದೆ.ಭದ್ರಾ ನದಿ ಎಡ ಮತ್ತು ಬಲ ದಂಡೆ ಹಾಗೂ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top