ದಾವಣಗೆರೆ: ಕಳೆದ ನಾಲ್ಕೈದು ದಿನಗಳಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಭದ್ರಾ ಜಲಾಶಯ ( bhadra dam) ನೀರಿನ ಹರಿವು ಹೆಚ್ಚಾಗಿದ್ದು, ಬೇಸಿಗೆಯಿಂದ ಒಳ ಹರಿವು ಕುಗ್ಗಿದ್ದ ಭದ್ರಾ ಜಲಾಶಯಕ್ಕೆ ಜೀವ ಕಳೆ ಬಂದಿದೆ.
ಮುಂಗಾರು ಪೂರ್ವ ಮಳೆಯಿಂದ ಜೀವ ಕಳೆ
ಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಚ್ಚುಕಟ್ಟಿನ ರೈತರಿಗೆ ಸಂತಸ ತಂದಿದೆ. ಇಂದು ( ಮೇ 27) ಭದ್ರಾ ಜಲಾಶಯ ನೀರಿನಮಟ್ಟ 137.8 ಅಡಿ ಇದ್ದು, ಒಳ ಹರಿವು 3034 ಕ್ಯೂಸೆಕ್ ಇದೆ. ಇನ್ನೂ ಮುಂಗಾರು ಮಳೆ ಅಧಿಕೃತವಾಗಿ ರಾಜ್ಯ ಪ್ರವೇಶಿಸಿಲ್ಲ. ಮುಂಗಾರು ಪೂರ್ವ ಮಳೆಯಿಂದಲೇ ಜಲಾನಯನಕ್ಕೆ ಜೀವ ಕಳೆ ಬಂದಿದೆ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :27-05-2025
- ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 25.325 ಟಿಎಂಸಿ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 137.8 ಅಡಿ
- ಒಳ ಹರಿವು : 3034 ಕ್ಯೂಸೆಕ್
- ಹೊರ ಹರಿವು : 500 ಕ್ಯೂಸೆಕ್
- ಎಡ ದಂಡೆ : 00 ಕ್ಯೂಸೆಕ್
- ಬಲ ದಂಡೆ : 80 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 117.1 ಅಡಿ
- ಇದೇ ದಿನ ಕಳೆದ ವರ್ಷದ ಒಳಹರಿವು: 2,199 ಕ್ಯೂಸೆಕ್
ಭಾನುವಾರ 499 ಕ್ಯೂಸೆಕ್ಸ್ ಇದ್ದ ಒಳಹರಿವು, ಸೋಮವಾರ 2860 ಕ್ಯೂಸೆಕ್ಸ್ಗೆ ದಿಢೀರ್ ಹೆಚ್ಚಳ ಕಂಡಿದೆ. ಇಂದು ( ಮಂಗಳವಾರ) ಜಲಾಶಯದ ನೀರಿನಮಟ್ಟ 137.8 ಅಡಿ ಆಗಿದೆ. ಒಳ ಹರಿವು 3034 ಕ್ಯೂಸೆಕ್ ಇದೆ. 71.535 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲೀಗ 25.325 ಟಿಎಂಸಿ ನೀರು ಸಂಗ್ರಹವಾಗಿದೆ.
ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ
ಮಂಗಾರಿ ಮಳೆ ಆಗಮನಕ್ಕೂ ಮುನ್ನವೇ ಗಾಜನೂರಿನ ತುಂಗಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಭಾನುವಾರ ಜಲಾಶಯದ 5 ಕ್ರಸ್ಟ್ ಗೇಟ್ಗಳ ಮೂಲಕ 7500 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.



