ಶಿವಮೊಗ್ಗ: ಜುಲೈ 15ರೊಳಗೆ ಭದ್ರಾ ಜಲಾಶಯದ ನೀರು 165 ಅಡಿ ತಲುಪಿದ್ರೆ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸಲು ನಿರ್ಮಾನಿಸಲಾಗಿದೆ.
ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಭದ್ರಾ ಜಲಾಶಯದಲ್ಲಿ ಸದ್ಯ 151.8 ಅಡಿ ನೀರು ಇದೆ. ಒಳ ಹರಿವು 2478 ಕ್ಯೂಸೆಕ್ ಇದ್ದು, ಹೊರ ಹರಿವು 128 ಕ್ಯೂಸೆಕ್ ಇದೆ. ಜುಲೈ 15ರೊಳಗೆ ನೀರಿನ ಮಟ್ಟ 165 ಅಡಿ ಮುಟ್ಟದಿದ ನಂತರ ಮತ್ತೊಮ್ಮೆ ಸಭೆ ಕರೆದು ನೀರು ಹರಿಸುವ ಬಗ್ಗೆ ಕಾಡಾ ಅಧ್ಯಕ್ಷೆ ಕೆ.ಬಿ. ಪವಿತ್ರಾ ರಾಮಯ್ಯ ಸಭೆಯಲ್ಲಿ ತಿಳಿಸಿದರು.
ಭದ್ರಾ ಜಲಾಶಯದಿಂದ ಎಡದಂಡೆ ನಾಲೆ, ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಯ ಮೂಲಕ ಅಚ್ಚುಕಟ್ಟು ಭಾಗಗಳಿಗೆ ನೀರು ಹರಿಸುವ ಬಗ್ಗೆ ಸಭೆ ನಡೆಯಿತು.
ಜುಲೈ 10ರಂದು ನೀರು ಹರಿಸಿದಲ್ಲಿ ರೈತರು, ಭತ್ತ ಬಿತ್ತಲು ಅನುಕೂಲವಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ನಾಲೆಗಳಲ್ಲಿ ಅಚ್ಚುಕಟ್ಟು ರೈತರಿಗೆ ನೀರು ಸಮರ್ಪಕವಾಗಿ ಹರಿಯುವಂತೆ ಎಲ್ಲಾ ರೀತಿಯ ಕ್ರಮ ವಹಿಸಲಾಗುವುದು ಎಂದು ಪವಿತ್ರಾ ರಾಮಯ್ಯ ಭರವಸೆ ನೀಡಿದರು.
ರೈತ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಭದ್ರಾ ಕಾಡಾ ನಿರ್ದೇಶಕರಾದ ವಿನಾಯಕ, ಹನುಮಂತಪ್ಪ, ರಾಜಪ್ಪ, ಷಡಾಕ್ಷರಿ, ಮಂಜುನಾಥ್ ಹುಲಿಕೆರೆ, ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ ಉಪಸ್ಥಿತರಿದ್ದರು.



