ದಾವಣಗೆರೆ: ಭದ್ರಾ ಜಲಾಶಯದಿಂದ ಈ ಬಾರಿಯ ಬೇಸಿಗೆ ಹಂಗಾಮಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ (ಐಸಿಸಿ) ತೆಗೆದುಕೊಂಡ ನಿರ್ಧಾರದಿಂದ ದಾವಣಗೆರೆ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ. ಈ ಅವೈಜ್ಞಾನಿಕ ನಿರ್ಧಾರಕ್ಕೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಕಾರಣವಾಗಿದೆ. ನಾಲೆಗೆ ಕನಿಷ್ಠ 60 ದಿನವಾದರೂ ನೀರು ಹರಿಸುವಂತೆ ಆಗ್ರಹಿಸಿ ಜ.10ರಂದು ಪ್ರತಿಭಟನೆ ಹಮ್ಮಿಕೊಳ್ಳಲು ರೈತ ಒಕ್ಕೂಟ ಕರೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಲಿಂಗರಾಜು ಶಾಮನೂರು, ಜ.10 ರಂದು ಪಿ. ಬಿ. ರಸ್ತೆಯ ಬೀರಲಿಂಗೇಶ್ವರ ದೇವಾಲಯದಿಂದ ಬೆಳಿಗ್ಗೆ 10.30ಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ. ಐಸಿಸಿ ಸಭೆಯ ನಿರ್ಧಾರ ಪುನರ್ ಪರಿಶೀಲಿಸಬೇಕು. ಕನಿಷ್ಠ 60 ದಿನವಾದರೂ ನೀರು ಬಿಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರು ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಯಬೇಕು ಎಂದರು.
ರೈತ ಮುಖಂಡ ಬಿ. ಎಂ. ಸತೀಶ್ ಕೊಳೇನಹಳ್ಳಿ ಮಾತನಾಡಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ನಿರ್ಲಕ್ಷತನ ಇಲ್ಲಿ ಎದ್ದು ಕಾಣುತ್ತದೆ. ಭದ್ರಾ ಜಲಾಶಯದಿಂದ ಹೆಚ್ಚು ನೀರು ಹರಿಸಿ ಜಿಲ್ಲೆಯ ರೈತರ ತೆಂಗು, ಅಡಿಕೆ, ಭತ್ತ ಬೆಳೆ ಉಳಿಸಿಕೊಳ್ಳಲು ನೆರವಾಗಬೇಕು. ತೋಟಗಾರಿಕೆ ಖಾತೆ ಹೊಂದಿರುವ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನರವರು ಐಸಿಸಿ ಸಭೆಗೆ ಗೈರು ಹಾಜರಾಗಿರುವುದು ಅವರ ರೈತ ವಿರೋಧಿ ನಡೆಯಾಗಿದೆ. ಬರದಿಂದ ತತ್ತರಿಸಿದ ರೈತರ ನೆರವಿಗೆ ಸಚಿವರು ಬರಬೇಕು ಎಂದರು.
ಜನವರಿ 20ರಿಂದ 12 ದಿನ ಕಾಲ ನೀರು ಹರಿಸುವುದು ಮತ್ತು 20 ದಿನ ನಿಲ್ಲಿಸುವ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಿಂದ ದಾವಣಗೆರೆ ಜಿಲ್ಲೆಯ ರೈತರಿಗೆ ಬಹುಡೊಡ್ಡ ಅನ್ಯಾಯವಾಗಿದೆ. 12 ದಿನ ನೀರು ಹರಿಸಿದರೆ ದಾವಣಗೆರೆ ಭಾಗದ ಜಮೀನುಗಳಿಗೆ ನೀರು ತಲುಪುವುದಿಲ್ಲ.ಅಧಿಕಾರಿಗಳು ಹೇಳುವ ಪ್ರಕಾರವೇ ಪ್ರತಿ ದಿನ ಎಡ ಮತ್ತು ಬಲದಂಡಗಳಿಗೆ ನೀರು ಬಿಡಲು 0.29 ಟಿ.ಎಂ.ಸಿ ನೀರು ಬೇಕಾಗುತ್ತದೆ. ಈಗ ಡ್ಯಾಂನಲ್ಲಿ ಲ ಡೆಡ್ ಸ್ಟೋರೇಜ್ 13.83 ಟಿ.ಎಂ.ಸಿ ತೆಗೆದರೆ ಉಳಿದ ಬಳಕೆಗೆ ಬರುವ ನೀರು 21.54 ಟಿ.ಎಂ.ಸಿ. ಇದನ್ನು ದಿನ 0.29 ರಂತೆ 74 ದಿನ ಹರಿಸಬಹುದು ಎಂದು ತಿಳಿಸಿದರು.
ಇಲ್ಲಿ 6.90 ಟಿ.ಎಂ.ಸಿ ನೀರನ್ನು ಕುಡಿಯುವ ನೀರು, ಕೈಗಾರಿಕೆಗಳಿಗೆ ಮತ್ತು ಆವಿಯಾಗುವ ನೀರು 1.91 ಟಿ.ಎಂ.ಸಿ ಎಂದು ಮೀಸಲಿಟ್ಟು ಲೆಕ್ಕ ಮಾಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ಪ್ರತ್ಯೇಕ ನಾಲೆಯಲ್ಲಿ ನೀರು ಬಿಟ್ಟ ಉದಾಹರಣೆ ಡ್ಯಾಂ ಇತಿಹಾಸದಲ್ಲಿಯೇ ಇಲ್ಲ. ನಾಲೆಗೆ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ಸೂಳೆಕೆರೆ ದಾವಣಗೆರೆಯ ಸ್ಟೇಷನ್ ಕೆರೆ, ಕುಂದುವಾಡದ ಕೆರೆ ಇನ್ನಿತರ ಕೆರೆಗಳಿಗೆ ತುಂಬಿಸಿಕೊಳ್ಳಬಹುದು ಅವಕಾಶವಿದೆ.ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ನೀರು ಮೀಸಲಿಡುವ ಅವಶ್ಯಕತೆ ಇಲ್ಲ ಎಂದರು.
1.91 ಟಿಎಂಸಿ ನೀರು ಆವಿಯಾಗುತ್ತದೆ ಎಂದು ಲೆಕ್ಕ ಹಾಕಿರುವುದು ತಲೆ ಬುಡವಿಲ್ಲದ ಲೆಕ್ಕಾಚಾರ. ರೈತರನ್ನು ಮೂರ್ಖರನ್ನಾಗಿಸುವ ಕುತಂತ್ರ. ಆವಿಯಾಗುವ ನೀರನ್ನು ಲೆಕ್ಕ ಹಾಕುವ ಅಧಿಕಾರಿಗಳು ಡಿಸೆಂಬರ್ ತಿಂಗಳಿನಿಂದ ತಿಂಗಳವರೆಗೆ ಡ್ಯಾಂಗೆ ಬರುವ ಒಳಹರಿವಿನ ಪ್ರಮಾಣ ಲೆಕ್ಕ ಮಾಡಿಲ್ಲ. ಶಿವಮೊಗ್ಗ ಜಿಲ್ಲೆಯ ಎಡದಂಡೆಗೆ ಪ್ರತ್ಯೇಕ ವೇಳಾಪಟ್ಟಿ ನಿಗದಿ ಮಾಡಿದ್ದು, ಜನವರಿ 10ರಿಂದಲೇ 16 ದಿನ ನೀರು ಹರಿಸುವುದು ಮತ್ತು 15 ದಿನ ನಿಲ್ಲಿಸುವುದು ನಿರ್ಣಯಿಸಲಾಗಿದೆ. ಎಡದಂಡೆಗೆ ಮತ್ತು ಬಲದಂಡೆಗೆ ಬೇರೆ ಬೇರೆ ವೇಳಾಪಟ್ಟಿ ಮಾಡಿದ್ದಾರೆ.ದಾವಣಗೆರೆ ಜಿಲ್ಲೆಯ ಕೊನೆ ಭಾಗಕ್ಕೆ ತಿಂಗಳಿಗೆ ಒಂದು ಸಲವಾದರೂ ನೀರು ತಲುಪದಿದ್ದರೆ ಜಿಲ್ಲೆಯ ಬೋರ್ ವೆಲ್ ಗಳು ಸಂಪೂರ್ಣ ಫೇಲ್ ಆಗುತ್ತಿವೆ. ಇದರಿಂದ ತೋಟಗಳು ನಾಶವಾಗುತ್ತವೆ ಎಂದರು.,
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೆ. ಬಿ. ಕೊಟ್ರೇಶ್, ನಾಗೇಶ್ವರರಾವ್, ಹೆಚ್. ಎನ್. ಗುರುನಾಥ್, ಕಡ್ಲೇಬಾಳು ಧನಂಜಯ್, ಶಿರಮಗೊಂಡನಹಳ್ಳಿ ಮಂಜುನಾಥ್, ಕುಂದುವಾಡ ಅಣ್ಣಪ್ಪ, ಕಲ್ಪನಹಳ್ಳಿ ಸತೀಶ್, ಹುಚ್ಚುನಾಥ್ ಮತ್ತಿತರು ಇದ್ದರು.