ದಾವಣಗೆರೆ: ಭದ್ರಾ ಬಲದಂಡೆ ನಾಲೆ ವಿಭಜನೆ ಮಾಡಿ ಚಿಕ್ಕಮಗಳೂರು, ತರೀಕೆರೆ, ಮತ್ತು ಹೊಸದುರ್ಗ ನಗರಕ್ಕೆ ಕುಡಿಯುವ ನೀರಿಗೆ 30 ಕ್ಯೂಸೆಕ್ ನೀರು ಹರಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಕೂಡಲೇ ಈ ಯೋಜನೆ ಕೈಬಿಡುವಂತೆ ಹರಿಹರ ಶಾಸಕ ಬಿ.ಪಿ. ಹರೀಶ್ ಆಗ್ರಹಿಸಿದ್ದಾರೆ.
ಈ ಯೋಜನೆ ಕಾಮಗಾರಿಗಳನ್ನು ಸರ್ಕಾರ ಯಾರಿಗೂ ಮಾಹಿತಿ ನೀಡದೇ ಗೌಪ್ಯವಾಗಿ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಜೂನ್ 23 ರಂದು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಹೊಸದುರ್ಗ ಮತ್ತು ತರೀಕೆರೆ ಶಾಸಕರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಇಲ್ಲಿ ಭದ್ರಾ ನಾಲೆ ವ್ಯಾಪ್ತಿಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಈ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಯಾವುದೇ ಕುಡಿಯುವ ನೀರಿಗೆ ನಮ್ಮ ವಿರೋಧವಿಲ್ಲ. ಆದರೆ, ಇಂತಹ ಯೋಜನೆಗೆ ನದಿಯಿಂದ ನೀರು ತೆಗೆದುಕೊಂಡು ಹೋಗಿಬೇಕೇ ಹೊರತು, ನೀರಾವರಿಗೆ ಬಳಸುವ ನಾಲೆಯಿಂದ ಹರಿಸುವುದಲ್ಲ ಎಂದರು. ಈ ಯೋಜನೆ ದಾವಣಗೆರೆ ಭಾಗದ ರೈತರ ಪಾಲಿಗೆ ಅಪಾಯ ಆಗಲಿದೆ. ಹರಿಹರ ತಾಲ್ಲೂಕುಗಳ ರೈತರು ಹೋರಾಟಕ್ಕೆ ಸಿದ್ಧರಾಗಿದ್ದು, ರೈತರು ಎಚ್ಚರಿಕೆಯಿಂದ ಇರಬೇಕು. ಈ ಬಗ್ಗೆ ಹೋರಾಟ ರೂಪಿಸಲಾಗುವುದು ಎಂದರು.