ದಾವಣಗೆರೆ: ದಾವಣಗೆರೆಯ ಯುಬಿಡಿಟಿ ಕಾಲೇಜು ಉಳಿಸಿ ಹಾಗೂ ಪೇಮೆಂಟ್ ಸೀಟ್ ರದ್ದುಪಡಿಸಬೇಕೆಂದು ಆಗ್ರಹಿಸಿ ಎಐಡಿಎಸ್ ಒ, ಯುಬಿಡಿಟಿ ಉಳಿಸಿ ಸಮಿತಿ ಹಾಗೂ ವಿವಿಧ ಸಂಘಟನೆ ಗಳು ಇಂದು (ಅ16) ಕರೆ ನೀಡಿದ್ದ ದಾವಣಗೆರೆ ಬಂದ್ ಗೆ ಬೆಳಗ್ಗೆಯಿಂದ ಕೆಲವಡೆ ಬೆಂಬಲ ವ್ಯಕ್ತವಾಗಿತ್ತು. ಇನ್ನೂ ಕೆಲವು ಕಡೆ ಸಹಜ ಸ್ಥಿತಿ ಇತ್ತು.
ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಂಘಟನಕಾರರು ಪ್ರಮುಖ ವೃತ್ತ, ರಸ್ತೆ ಇತರೆಡೆ ಸಂಚರಿಸಿ ಬಂದ್ ಗೆ ಬೆಂಬಲಿಸುವಂತೆ ಕೋರಿದರು. ಖಾಸಗಿ ಬಸ್ ಇತೆರೆ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು. ಆದರೆ, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್ ಸಂಚಾರ ಇತ್ತು. ಈ ವೇಳೆ ಪ್ರತಿಭಟನೆಗೆ ಮುಂದಾದವರನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಪಿ ಉಮಾ ಪ್ರಶಾಂತ್ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಬೆಳಗ್ಗೆಯಿಂದಲೇ ಬಂದೋಬಸ್ತ್ ಪರಿಶೀಲಿಸಿದರು.
ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಪ್ರತಿಭಟನೆ ನಿರತ ಎಐಡಿಎಸ್ ಒ, ಯುಬಿಡಿಟಿ ಉಳಿಸಿ ಹೋರಾಟ ಸಮಿತಿಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಪ್ರಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಎಂಬ ಖ್ಯಾತಿಯ ದಾವಣಗೆರೆ ಯುಬಿಡಿಟಿ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದ ಪ್ರಥಮ ಸೆಮಿಸ್ಟರ್ ನಿಂದ ಶೇ.50 ಪೇಮೆಂಟ್ ಕೋಟಾ ಜಾರಿಗೊಳಿಸುವ ಮೂಲಕ ಸರ್ಕಾರವೇ ಶಿಕ್ಷಣದ ವ್ಯಾಪಾರಕ್ಕಿಳಿದಿದೆ. ಕೂಡಲೇ ಶೇ. 50 ಪೇಮೆಂಟ್ ಕೋಟಾ ರದ್ದುಪಡಿಸಬೇಜು. ಇದರ ಜೊತೆಗೆ ಯುಬಿಡಿಟಿ ಅಭಿವೃದ್ಧಿಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ದಾವಣಗೆರೆ ಬಂದ್ ಕರೆಗೆ ರೈತ, ಕನ್ನಡಪರ, ಮಹಿಳಾ ಸಂಘಟನೆ, ಸಿಪಿಐ, ಸಿಪಿಐ(ಎಂ) ಹಲವು ಸಂಘಟಬೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.



