Connect with us

Dvgsuddi Kannada | online news portal | Kannada news online

ದಾವಣಗೆರೆ: ಅಶೋಕ ಟಾಕೀಸ್ ರೈಲ್ವೆ ಗೇಟ್ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ; ಭಾರೀ ವಾಹನಗಳ ಸಂಚಾರಕ್ಕೆ ಮತ್ತೊಂದು ಕೆಳ ಸೇತುವೆ ನಿರ್ಮಾಣ- 49.26 ಕೋಟಿ ಮಂಜೂರು

ದಾವಣಗೆರೆ

ದಾವಣಗೆರೆ: ಅಶೋಕ ಟಾಕೀಸ್ ರೈಲ್ವೆ ಗೇಟ್ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ; ಭಾರೀ ವಾಹನಗಳ ಸಂಚಾರಕ್ಕೆ ಮತ್ತೊಂದು ಕೆಳ ಸೇತುವೆ ನಿರ್ಮಾಣ- 49.26 ಕೋಟಿ ಮಂಜೂರು

ದಾವಣಗೆರೆ: ಅಶೋಕ ಟಾಕೀಸ್ ರೈಲ್ವೆ ಗೇಟ್ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಭಾರೀ ವಾಹನಗಳ ಸಂಚಾರಕ್ಕೆ ಮತ್ತೊಂದು ಕೆಳ ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ 49.26 ಕೋಟಿ ಮಂಜೂರು ಮಾಡಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.

ನಗರದಲ್ಲಿ ಎರಡ್ಮೂರು ದಶಕಗಳಿಂದ ಸಮಸ್ಯೆಯಾಗಿದ್ದ ಅಶೋಕ ಟಾಕೀಸ್ ಹತ್ತಿರದ ರೈಲ್ವೆ ಗೇಟ್ ಸಮಸ್ಯೆಗೆ ಕೊನೆಗೂ ಶಾಶ್ವತ ಪರಿಹಾರ ದೊರಕಿದೆ. ಈಗಾಗಲೇ ಅಶೋಕ ಟಾಕೀಸ್ ಹತ್ತಿರದ  ಲಘು ವಾಹನಗಳ ಸಂಚಾರಕ್ಕಾಗಿ ಕೆಳಸೇತುವೆ ನಿರ್ಮಾಣ ಮಾಡಲಾಗಿದ್ದು, ಭಾರೀ ವಾಹನಗಳ ಸಂಚಾರದ ಸಮಸ್ಯೆಗೆ ಪರಿಹಾರ ದೊರಕಿರಲಿಲ್ಲ, ಈಗ ಅಶೋಕ ಟಾಕೀಸ್ ಹತ್ತಿರ ರೈಲ್ವೆ ಗೇಟ್‌ನಿಂದ 640 ಮೀಟರ್ ದೂರದಲ್ಲಿ ಪದ್ಮಾಂಜಲಿ ಟಾಕೀಸ್ ಹತ್ತಿರ ಬೃಹತ್ ಗಾತ್ರದ ಎರಡು ವೆಂಟ್‌ಗಳ ಕೆಳ ಸೇತುವೆ ನಿರ್ಮಾಣ ಮಾಡಲು ರೈಲ್ವೆ ಸಚಿವಾಲಯವು ರೂ.49.26 ಕೋಟಿ ಅನುದಾನವನ್ನು ಮಂಜೂರು ಮಾಡಿದೆ ಎಂದು ಸಂಸದ ಡಾ.ಜಿ. ಎಂ. ಸಿದ್ದೇಶ್ವರ ಅವರು ಮಾಹಿತಿ ನೀಡಿದ್ದಾರೆ.

ರೈಲ್ಬೆ ಮಾರ್ಗದಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳನ್ನು ನಿರ್ಮೂಲನೆ ಮಾಡಿ ಅಲ್ಲಿ ಕೆಳಸೇತುವೆ ಅಥವಾ ಮೇಲು ಸೇತುವೆಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರದ ಶೇಕಡ 50 ರಷ್ಟು ಅನುದಾನ ನೀಡಲು ಈ ಹಿಂದೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು, ಆದರೆ, ಇತ್ತೀಚಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇಕಡ 50 ರಷ್ಟು ಅನುದಾನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರವರನ್ನು ಖುದ್ದು ಭೇಟಿ ಮಾಡಿ ಇಲ್ಲಿನ ಸಮಸ್ಯೆಯನ್ನು ವಿವರಿಸಿ ಸಂಪೂರ್ಣ ಹಣವನ್ನು ರೈಲ್ವೆ ಇಲಾಖೆಯಿಂದಲೇ ಭರಿಸುವಂತೆ ಒತ್ತಡ ಹೇರಿದ್ದರು.

ಸಂಸದರ ಒತ್ತಡಕ್ಕೆ ಮಣಿದು ರೈಲ್ವೆ ಕಾಮಗಾರಿಗಳಿಗೆ ಹಿನ್ನೆಡೆಯಾಗಬಾರದೆಂಬ ಕಾರಣಕ್ಕೆ ಅಶೋಕ ಟಾಕೀಸ್ ಹತ್ತಿರದ ಈ ಕೆಳಸೇತುವೆ ನಿರ್ಮಾಣಕ್ಕೆ ಭೂ-ಸ್ವಾಧೀನಕ್ಕೆ ಬೇಕಾಗುವ ವೆಚ್ಚವೂ ಸೇರಿ ಒಟ್ಟು ರೂ.49.26 ಕೋಟಿ ಸಂಪೂರ್ಣ ಹಣವನ್ನು ರೈಲ್ವೆ ಸಚಿವಾಲಯವೇ ಮಂಜೂರು ಮಾಡಿದೆ.

ಶಾಂತಿ ಟಾಕೀಸ್ ಕಡೆಯಿಂದ ಬರುವ ವಾಹನಗಳು ರೈಲ್ವೆ ಹಳಿ ಪಕ್ಕದಲ್ಲಿರುವ ಕಿರವಾಡಿ ಹಾಗೂ ಇತರೆ ಜಮೀನಿನ ಮಾಲೀಕರ ಜಾಗದಲ್ಲಿ ನಿರ್ಮಾಣವಾಗಲಿರುವ 60 ಅಡಿ ಅಗಲದ ಸಮಾನಾಂತರ ರಸ್ತೆಯಲ್ಲಿ ಸಾಗಿ ಪದ್ಮಾಂಜಲಿ ಟಾಕೀಸ್ ಹತ್ತಿರ ನಿರ್ಮಾಣವಾಗಲಿರುವ ಎರಡು ಬೃಹತ್ ಗಾತ್ರದ ವೆಂಟ್‌ಗಳಲ್ಲಿ ಒಂದು ವೆಂಟ್ ಮೂಲಕ ಬಂದು ಈರುಳ್ಳಿ ಮಾರ್ಕೆಟ್ ಕಡೆಗೂ ಹಾಗೂ ಲಿಂಗೇಶ್ವರ ದೇವಸ್ಥಾನದ ಕಡೆಗೂ ಸಂಚರಿಸಬಹುದು. ಇನ್ನೊಂದು ವೆಂಟ್‌ನಲ್ಲಿ ಲಿಂಗೇಶ್ವರ ದೇವಸ್ಥಾನದ ಕಡೆಯಿಂದ ಶಾಂತಿ ಟಾಕೀಸ್ ರಸ್ತೆ ಕಡೆಗೆ ಹೋಗುವ ವಾಹನಗಳು ಸಂಚರಿಸಬಹುದು.

ರೈಲ್ವೆ ಹಳಿಗೆ ಸಮಾನಾಂತರವಾಗಿ ಸುಮಾರು 700 ರಿಂದ 800 ಮೀಟರ್ 60 ಅಡಿ ಅಗಲದ ಸಮಾನಾಂತರ ರಸ್ತೆ ನಿರ್ಮಾಣವಾಗಬೇಕಾಗಿದ್ದು, ಈ ರಸ್ತೆ ನಿರ್ಮಾಣಕ್ಕೆ ಬೇಕಾಗುವ ಭೂಸ್ವಾಧೀನದ ಹಣವನ್ನೂ ಸಹ ರೈಲ್ವೆ ಇಲಾಖೆಯೇ ಭರಿಸಲಿದೆ. ಒಟ್ಟಾರೆಯಾಗಿ ಕೆಳಸೇತುವೆ ನಿರ್ಮಾಣ ಯೋಜನೆಗೆ ಒಟ್ಟು ರೂ.49.26 ಕೋಟಿ ಹಣವನ್ನು ರೈಲ್ವೆ ಇಲಾಖೆಯೇ ಭರಿಸಿರುವುದರಿಂದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರಿಗೆ ಜಿ.ಎಂ. ಸಿದ್ದೇಶ್ವರ ಅಭಿನಂದನೆ ಸಲ್ಲಿಸಿದ್ದಾರೆ.

ಶೀಘ್ರವೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸಮಾನಾಂತರ ರಸ್ತೆ ನಿರ್ಮಾಣಕ್ಕೆ ಭೂ-ಸ್ವಾಧೀನವಾಗಲಿರುವ ಭೂಮಾಲೀಕರ ಸಭೆಯನ್ನು ಇನ್ನೊಂದು ವಾರದೊಳಗೆ ಕರೆದು ಜಾಗ ನೀಡುವ ಕುರಿತು ಒಪ್ಪಿಗೆ ಪಡೆದು ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದರೆ ರೈಲ್ವೆ ಇಲಾಖೆ ಕಾಮಗಾರಿಗೆ ಟೆಂಡರ್ ಕರೆಯಲಿದೆ. ಈ ಪ್ರಕ್ರಿಯೆನ್ನು ಶೀಘ್ರವಾಗಿ ಪೂರ್ಣಗೊಳಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top